ನವದೆಹಲಿ: ‘ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ಹೋದರೆ, ಮನೆಯಲ್ಲಿರುವಂತಹ ಭಾವನೆ ಉಂಟಾಯಿತು’ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೊಡಾ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.
‘ನೆರೆ ರಾಷ್ಟ್ರಗಳ ಜೊತೆಗೆ ಭಾರತದ ಸಂಬಂಧವು ಗಣನೀಯವಾಗಿ ಸುಧಾರಿಸಬೇಕು ಎಂದು ಸಲಹೆ ನೀಡಿರುವ ಪಿತ್ರೊಡಾ, ಈ ಹಿಂದೆ ಪಾಕಿಸ್ತಾನಕ್ಕೆ ಭೇಟಿ ನೀಡಿದ ವೇಳೆ ಮನೆಯಲ್ಲಿ ಇರುವ ಭಾವನೆ ಉಂಟಾಯಿತು’ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ‘ಪಿತ್ರೊಡಾ ಹೇಳಿಕೆಯು ದೇಶದ ಸೈನಿಕರು ಹಾಗೂ ಜನರನ್ನು ಅವಮಾನಿಸಿದೆ. ರಾಹುಲ್ ಗಾಂಧಿ ಅವರ ಆದೇಶದ ಮೇರೆಗೆ ಕಾಂಗ್ರೆಸ್ ನಾಯಕರು ಪಾಕಿಸ್ತಾನವನ್ನು ವೈಭವೀಕರಿಸಿ ಮಾತನಾಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
‘ಇದು ಕೇವಲ ಸ್ಯಾಮ್ ಪಿತ್ರೊಡಾ ಹೇಳಿಕೆಯಲ್ಲ. ಇದು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಗಾಂಧಿ–ವಾದ್ರಾ ಕುಟುಂಬದ ನೀತಿಯಾಗಿದೆ. ಈ ಕುಟುಂಬದ ಹೃದಯವು ಭಯೋತ್ಪಾದಕ ಪಾಕಿಸ್ತಾನದಲ್ಲಿ ನೆಲಸಿದೆ’ ಎಂದು ಆರೋಪಿಸಿದ್ದಾರೆ.
ಬಿಜೆಪಿಯ ಈ ಆರೋಪದ ಕುರಿತಂತೆ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂಬುದು ಇಸ್ಲಾಮಾಬಾದ್ ರಾಷ್ಟ್ರೀಯ ಕಾಂಗ್ರೆಸ್ ಆಗಿ ಪರಿವರ್ತನೆಯಾಗಿದೆ’ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.