ನವದೆಹಲಿ: ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ವಿಶ್ವ ಹಿಂದೂ ಪರಿಷತ್ (VHP) ಸಮಾವೇಶದಲ್ಲಿ ಪಾಲ್ಗೊಂಡು ಭಾಷಣ ಮಾಡಿರುವ ಕುರಿತು ಪ್ರಕಟಗೊಂಡ ಸುದ್ದಿಯನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್ ಮಾಹಿತಿ ಕೇಳಿದೆ.
ನ್ಯಾ. ಯಾದವ್ ಅವರು ಮಾಡಿರುವ ಭಾಷಣದ ಪೂರ್ಣಪಾಠ ಪಡೆದು ಮಾಹಿತಿ ನೀಡುವಂತೆ ಅಲಹಾಬಾದ್ ಹೈಕೋರ್ಟ್ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ವಿಶ್ವ ಹಿಂದೂ ಪರಿಷತ್ನ ಕಾನೂನು ಕೋಶ ಮತ್ತು ಹೈಕೋರ್ಟ್ ಘಟಕವು ಅಲಹಾಬಾದ್ ಹೈಕೋರ್ಟ್ನಲ್ಲಿ ಡಿ. 8ರಂದು ಆಯೋಜಿಸಿದ್ದ ಪ್ರಾಂತೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ನ್ಯಾ. ಯಾದವ್, ‘ಸಾಮಾಜಿಕ ಸಾಮರಸ್ಯ, ಲಿಂಗ ಸಮಾನತೆ ಹಾಗೂ ಜಾತ್ಯತೀತತೆಯನ್ನು ಉತ್ತೇಜಿಸುವುದೇ ಏಕರೂಪ ನಾಗರಿಕ ಸಂಹಿತೆಯ ಮುಖ್ಯ ಗುರಿ’ ಎಂದಿದ್ದರು.
ಈ ಹೇಳಿಕೆ ನೀಡಿದ ನಂತರ ನ್ಯಾಯಮೂರ್ತಿ ಭಾಷಣದ ಕೆಲ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದವು. ವಿರೋಧ ಪಕ್ಷಗಳು ಹೇಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದವು. ಇದು ದ್ವೇಷ ಭಾಷಣ ಎಂದೂ ಆರೋಪಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.