ADVERTISEMENT

ಇಂದು ಬೆಂಗಳೂರು – ಚೆನ್ನೈ ಶತಾಬ್ಧಿ ಎಕ್ಸ್‌ಪ್ರೆಸ್ ರೈಲು ಸಂಚಾರ ಇಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2021, 1:24 IST
Last Updated 24 ಡಿಸೆಂಬರ್ 2021, 1:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಬೆಂಗಳೂರಿನಿಂದ ಶುಕ್ರವಾರ ಬೆಳಿಗ್ಗೆ ಚೆನ್ನೈಗೆ ಹೊರಡಬೇಕಿದ್ದ ಶತಾಬ್ಧಿ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಅರಕ್ಕೋಣಂ ಮತ್ತು ಕಟ್ಪಾಡಿ ನಡುವಣ ಸೇತುವೆಯಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದಕ್ಷಿಣ ರೈಲ್ವೆ ಹೇಳಿಕೆ ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಚೆನ್ನೈಯಿಂದ ಶುಕ್ರವಾರ ಸಂಜೆ ಬೆಂಗಳೂರಿಗೆ ಹೊರಡಬೇಕಿರುವ ಶತಾಬ್ಧಿ ಎಕ್ಸ್‌ಪ್ರೆಸ್ ರೈಲು ಸಂಚಾರ ಕೂಡ ರದ್ದಾಗಿದೆ. ಆದರೆ ಚೆನ್ನೈ – ಮೈಸೂರು ಹಾಗೂ ಮೈಸೂರು – ಚೆನ್ನೈ ನಡುವಣ ಶತಾಬ್ಧಿ ರೈಲುಗಳು ಸಂಚರಿಸಲಿವೆ ಎಂದು ವರದಿ ಉಲ್ಲೇಖಿಸಿದೆ.

ರೈಲು ಸಂಚಾರ ರದ್ದುಗೊಳಿಸಿರುವ ಕುರಿತು ಗುರುವಾರ ತಡರಾತ್ರಿ ದಕ್ಷಿಣ ರೈಲ್ವೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

ADVERTISEMENT

ಅರಕ್ಕೋಣಂ – ಕಟ್ಪಾಡಿ ಸೆಕ್ಷನ್‌ನಲ್ಲಿ ಬರುವ ಮುಕುಂದರಾಯಪುರಂ ಮತ್ತು ತಿರುವಳಂ ನಿಲ್ದಾಣಗಳ ಮಧ್ಯೆ ಇರುವ ಸೇತುವೆಯಲ್ಲಿನ ಸಂಚಾರವನ್ನು ಸುರಕ್ಷತಾ ದೃಷ್ಟಿಯಿಂದ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಿನಿಂದ ಡಿಸೆಂಬರ್ 24ರ ಬೆಳಿಗ್ಗೆ 6ಕ್ಕೆ ಹೊರಡಬೇಕಿರುವ ರೈಲು ಸಂಖ್ಯೆ, ‘12028 ಕೆಎಸ್ಆರ್ ಬೆಂಗಳೂರು – ಚೆನ್ನೈ ಶತಾಬ್ಧಿ ಎಕ್ಸ್‌ಪ್ರೆಸ್’ ಹಾಗೂ ಚೆನ್ನೈಯಿಂದ ಸಂಜೆ 5.30ಕ್ಕೆ ಹೊರಡಬೇಕಿರುವ ರೈಲು ಸಂಖ್ಯೆ, ‘12027 ಚೆನ್ನೈ – ಕೆಎಸ್ಆರ್ ಬೆಂಗಳೂರು ಶತಾಬ್ಧಿ ಎಕ್ಸ್‌ಪ್ರೆಸ್’ ಸಂಚಾರ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೆಮು, ಎಮು ರೈಲುಗಳೂ ಸೇರಿದಂತೆ ಚೆನ್ನೈ ಹಾಗೂ ಅರಕ್ಕೋಣಂ ನಿಲ್ದಾಣಗಳಿಂದ ಡಿಸೆಂಬರ್ 24 ಹಾಗೂ 25ರಂದು ತಿರುವನಂತಪುರ, ಅಲೆಪ್ಪಿ, ಮಂಗಳೂರು, ಕೊಯಮತ್ತೂರು ಸೇರಿದಂತೆ ಹಲವು ನಗರಗಳಿಗೆ ತೆರಳಬೇಕಿರುವ ಅನೇಕ ರೈಲುಗಳ ಸಂಚಾರವನ್ನೂ ರದ್ದುಪಡಿಸಲಾಗಿದೆ. ಕೆಲವು ರೈಲುಗಳ ಪ್ರಯಾಣದ ಸಮಯ ಬದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.