ನಾಸಿಕ್: ಒಂದು ವೇಳೆ ಶಿವಸೇನಾ ಇಲ್ಲದೇ ಹೋಗಿದ್ದರೆ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಸಾಧ್ಯವಾಗುತ್ತಿರಲಿಲ್ಲ ಎಂದು ಎಂದು ಶಿವಸೇನಾದ (ಯುಟಿಬಿ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಇಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ‘ನಮಗೂ ರಾಮನಿಗೂ ಭಾರಿ ಹಳೆಯ ಸಂಬಂಧವಿದೆ. ರಾಮನೊಂದಿಗೆ ಶಿವಸೇನಾದ ಸಂಬಂಧ ತೀವ್ರ ಭಾವನಾತ್ಮಕವಾದುದು. ಅದು ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿದಲ್ಲ. ಶ್ರೀರಾಮನೊಂದಿಗೆ ಯಾರಿಗಾದರೂ ಹಳೇಯ ಸಂಬಂಧ ಇದ್ದರೆ ಅದು ಶಿವಸೇನಾಗೆ ಮಾತ್ರ’ ಎಂದು ಅವರು ನುಡಿದಿದ್ದಾರೆ.
‘ಒಂದು ವೇಳೆ ಶಿವಸೇನಾ ಇಲ್ಲದಿದ್ದರೆ, ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರಲಿಲ್ಲ. ಶಿವಸೇನಾದ ಹುಲಿಗಳು ತೋರಿಸಿದ ಧೈರ್ಯದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣ ಪ್ರತಿಷ್ಠಾಪನೆ ಮಾಡುವಂತಾಯಿತು’ ಎಂದು ಅವರು ಹೇಳಿದ್ದಾರೆ.
ರಾಮ ಜನ್ಮಭೂಮಿ ಚಳವಳಿಯಲ್ಲಿ ಕೊಡುಗೆ ಸಂಬಂಧ ಮಹಾರಾಷ್ಟ್ರ ಬಿಜೆಪಿ ಹಾಗೂ ಶಿವಸೇನಾ (ಯುಟಿಬಿ) ನಡುವೆ ಮಾತಿನ ಚಕಮಕಿ ನಡೆದಿತ್ತು. ರಾಮ ಮಂದಿರ ಚಳವಳಿಯಲ್ಲಿ ಶಿವಸೇನಾ (ಯುಟಿಬಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಅವರ ಪುತ್ರ ಆದಿತ್ಯ ಠಾಕ್ರೆ ಹಾಗೂ ರಾವುತ್ ಅವರ ಕೊಡುಗೆ ಏನು ಎಂದು ಬಿಜೆಪಿ ಪ್ರಶ್ನೆ ಮಾಡಿತ್ತು. ಇನ್ನೊಂದೆಡೆ ಬಾಬರಿ ಮಸೀದಿ ಧ್ವಂಸದ ಶ್ರೇಯಸ್ಸು ತನ್ನದೇ ಎಂದು ಶಿವಸೇನಾ (ಯುಟಿಬಿ) ಹೇಳಿಕೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.