ಲೋಕಸಭೆ ಆವರಣದಲ್ಲಿ ವಿಪಕ್ಷಗಳ ಸಂಸದರು
(ಪಿಟಿಐ ಚಿತ್ರ)
ನವದೆಹಲಿ: ವಿರೋಧ ಪಕ್ಷಗಳಿಗೆ ಸೇರಿದ ಹಲವು ಸಂಸದರು ಬಿಜೆಪಿಯ ಸಂಸದರಿಗೆ ಬುಧವಾರ ತ್ರಿವರ್ಣಗಳ ಕಾರ್ಡ್ ಮತ್ತು ಕೆಂಪು ಬಣ್ಣದ ಗುಲಾಬಿ ಹೂವು ನೀಡಿದರು. ಅದಾನಿ ವಿಚಾರ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು, ಬಿಜೆಪಿಯ ಸದಸ್ಯರನ್ನು ಈ ಮೂಲಕ ಒತ್ತಾಯಿಸಿದರು.
ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿದಿನ ನಡೆಯುತ್ತಿರುವ ವಿನೂತನ ಪ್ರತಿಭಟನೆಗಳ ಸಾಲಿಗೆ ಇದು ಹೊಸ ಸೇರ್ಪಡೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಸಂಸತ್ ಭವನ ಪ್ರವೇಶಿಸುತ್ತಿದ್ದ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತ್ರಿವರ್ಣದ ಕಾರ್ಡ್ ಒಂದನ್ನು ನೀಡಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ಸಿನ ಸಂಸದರು, ಡಿಎಂಕೆ, ಜೆಎಂಎಂ ಮತ್ತು ಎಡ ಪಕ್ಷಗಳ ಸಂಸದರು ಕೈಯಲ್ಲಿ ತ್ರಿವರ್ಣದ ಕಾರ್ಡ್ ಹಿಡಿದು ಸಂಸತ್ ಭವನದ ಮಕರ ದ್ವಾರದ ಮೆಟ್ಟಿಲುಗಳ ಮೇಲೆ ನಿಂತಿದ್ದರು. ಕೆಲವರ ಕೈಯಲ್ಲಿ ‘ದೇಶವನ್ನು ಮಾರಲು ಬಿಡಬೇಡಿ’ ಎಂಬ ಬರಹ ಇರುವ ಭಿತ್ತಿಫಲಕಗಳು ಇದ್ದವು.
ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ಅವರ ವ್ಯಂಗ್ಯಭಾವಚಿತ್ರ ಹಾಗೂ ‘ಮೋದಿ ಅದಾನಿ ಭಾಯಿ ಭಾಯಿ’ ಎಂಬ ಬರಹ ಇರುವ ಜೋಳಿಗೆ ಹಿಡಿದು ವಿರೋಧ ಪಕ್ಷಗಳ ಸಂಸದರು ಸಂಸತ್ತಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.