ಬೆಂಗಳೂರು: ಅಸ್ಸಾಂನ ಉದಲ್ಗುರಿ ಜಿಲ್ಲೆಯ ಕನಿಷ್ಠ 12 ಗ್ರಾಮಗಳ ಜನರಿಗೆ ಸೋಲಾರ್ ಶಕ್ತಿ ಹೊಸ ಭರವಸೆ ನೀಡುತ್ತಿದೆ. ಇದಕ್ಕೆ ಕಾರಣವಾಗಿದ್ದು ಕಾಡಾನೆಗಳ ಉಪಟಳದಿಂದ ಮುಕ್ತಿ. ಅಸ್ಸಾಂನ ನಗ್ರಿಜುಲಿ ಪ್ರದೇಶದಲ್ಲಿ ಅರಣ್ಯಕ್ ವತಿಯಿಂದ 18 ಕಿಮೀ. ಸೋಲಾರ್ ಬೇಲಿ ಅಳವಡಿಸಲಾಗಿದೆ. ಅರಣ್ಯಕ್ ಎನ್ನುವುದು ಜೀವವೈವಿಧ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಒಂದು ತಂಡವಾಗಿದೆ. ಸೋಲಾರ್ ಬೇಲಿ ಅಳವಡಿಕೆಯಿಂದ 15,000ಕ್ಕೂ ಅಧಿಕ ಗ್ರಾಮಸ್ಥರಿಗೆ ಕಾಡಾನೆಗಳ ಉಪಟಳದಿಂದ ಮುಕ್ತಿ ದೊರೆತಿದೆ. ಅಸ್ಸಾಂನ ನಗ್ರಿಜುಲಿ ಪ್ರದೇಶದಲ್ಲಿ ಅತ್ಯಧಿಕ ಸಂಖ್ಯೆಯುಲ್ಲಿ ಮಾನವ-ಆನೆ ನಡುವಣ ಸಂಘರ್ಷ ದಾಖಲಾಗುತ್ತದೆ.
ಸೋಲಾರ್ ಶಕ್ತಿ ಚಾಲಿತ ಬೇಲಿ ಇದಾಗಿದ್ದು, ಸೋಲಾರ್ ಪ್ಯಾನಲ್, ಬ್ಯಾಟರಿ ವ್ಯವಸ್ಥೆ ಹೊಂದಿದೆ. ಇವುಗಳನ್ನು ಪ್ರಾಣಿಗಳು ಸ್ಪರ್ಶಿಸಿದಾಗ ಸಣ್ಣದಾಗಿ ಶಾಕ್ ಹೊಡೆಯುತ್ತದೆ, ಅದರ ಹೊರತು ಬೇರೇನೂ ಅಪಾಯ ಉಂಟಾಗುವುದಿಲ್ಲ. ಇದರಿಂದಾಗಿ ವಿದ್ಯುತ್ ಬೇಲಿ ಇರಬಹುದು ಎಂದು ಪ್ರಾಣಿಗಳು ಹಿಂದೆ ಸರಿಯುತ್ತವೆ, 0.003 ಸೆಕೆಂಡ್ಸ್ ಅವಧಿಯ ಶಾಕ್ ಇದಾಗಿದ್ದು, ಜೀವಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅರಣ್ಯಕ್ ಹೇಳಿದೆ.
ಅಸ್ಸಾಂ ಅರಣ್ಯ ಇಲಾಖೆ ಸಹಯೋಗದಲ್ಲಿ ಅರಣ್ಯಕ್, ಎಲಿಫೆಂಟ್ ಫ್ಯಾಮಿಲಿ ಫೌಂಡೇಶನ್, ಇಂಡಿಯಾ ಸಹಾಯದೊಂದಿಗೆ ಸೋಲಾರ್ ಬೇಲಿ ಅಳವಡಿಸಿದೆ. 2011ರಿಂದ ಅಸ್ಸಾಂನಲ್ಲಿ ಕನಿಷ್ಠ 100 ಆನೆಗಳು ವಿದ್ಯುತ್ ಅಘಾತಕ್ಕೆ ಸಿಲುಕಿ ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ಹೇಳಿದೆ.
ಆರಂಭಿಕ ಹಂತದಲ್ಲಿ ಸ್ವಲ್ಪ ಪ್ರದೇಶದಲ್ಲಿ ಸೋಲಾರ್ ಬೇಲಿ ಅಳವಡಿಸಿ, ಯಶಸ್ವಿಯಾದ ಬಳಿಕ ಇತರ ಪ್ರದೇಶಗಳಿಗೂ ವಿಸ್ತರಿಸಲಾಗಿದೆ. ಜತೆಗೆ ಅದರ ನಿರ್ವಹಣೆಯನ್ನೂ ಗ್ರಾಮ ಸಮಿತಿಗೆ ಹಸ್ತಾಂತರಿಸಲಾಗಿದೆ. ಇದರಿಂದಾಗಿ ಗ್ರಾಮಸ್ಥರಿಗೆ ನೆಮ್ಮದಿ ದೊರೆತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.