ನವದೆಹಲಿ: ಕಾಂಗ್ರೆಸ್ ಪಕ್ಷವುತೈಲ ಬೆಲೆ ಏರಿಕೆ ಮತ್ತು ಹಣದುಬ್ಬರದ ವಿರುದ್ಧ ಡಿಸೆಂಬರ್ 12ರಂದು ‘ಮೆಹಂಗಾಯಿ ಹಟಾವೋ’ ರ್ಯಾಲಿಯನ್ನು ಹಮ್ಮಿಕೊಂಡಿದೆ.
‘ದೇಶದ ಜನರ ಗಮನವನ್ನು ತೈಲ ಬೆಲೆ ಏರಿಕೆ ಮತ್ತು ಹಣದುಬ್ಬರದತ್ತ ಸೆಳೆಯುವ ನಿಟ್ಟಿನಲ್ಲಿ ಪಕ್ಷವು ಡಿಸೆಂಬರ್ 12ರಂದು ‘ಮೆಹಂಗಾಯಿ ಹಟಾವೋ’ ರ್ಯಾಲಿಯನ್ನು ನಡೆಸಲಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ’ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಮೋದಿ ಸರ್ಕಾರ ಲೂಟಿಯನ್ನು ನಿಲ್ಲಿಸಬೇಕು ಮತ್ತು ತೈಲ ದರವನ್ನು ಇಳಿಸಬೇಕು.ಅಲ್ಲಿಯವರೆಗೆ ನಾವು ಆಂದೋಲನ ಮುಂದುವರಿಸಲಿದ್ದೇವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ಭಾರತದ ನಾಗರಿಕರು ಕ್ರೂರತನ ಮತ್ತು ಹೇಳಲಾಗದ ನೋವನ್ನು ಅನುಭವಿಸುತ್ತಿದ್ದಾರೆ. ದೈನಂದಿನ ಅಗತ್ಯ ವಸ್ತುಗಳನ್ನು ಪಡೆಯಲು ಜನರು ಕಷ್ಟಪಡುತ್ತಿದ್ದಾರೆ. ಇವೆಲ್ಲವನ್ನೂ ಮೋದಿ ಸರ್ಕಾರ ನಿರ್ಲಕ್ಷ್ಯಿಸುತ್ತಿದೆ. ಕೆಲವೊಂದು ಎಲೆಕ್ಟ್ರಾನಿಕ್ ಮಾಧ್ಯಮಗಳು ಇದನ್ನು ಬೆಂಬಲಿಸುತ್ತಿವೆ. ಅಲ್ಲದೆ, ಜನರ ದಿಕ್ಕು ತಪ್ಪಿಸಲು ಧಾರ್ಮಿಕ ಭಾವನೆಯನ್ನು ಮೋದಿ ಸರ್ಕಾರ ಬಳಸುತ್ತಿದೆ’ ಎಂದು ಅವರು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.