ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್
ಪಟ್ನಾ: ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಅವರು ತಮ್ಮ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರನ್ನು ಪಕ್ಷದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಿರುವುದಾಗಿ ಭಾನುವಾರ ಹೇಳಿದ್ದಾರೆ.
ತೇಜ್ ಪ್ರತಾಪ್ ಅವರನ್ನು ಪಕ್ಷದಿಂದ ಉಚ್ಚಾಟನೆ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ‘ಕೆಲವು ವಿಷಯಗಳನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ತೇಜ್ ಅವರ ಬೇಜವಾಬ್ದಾರಿಯುತ ವರ್ತನೆಯಿಂದ ಬೇಸತ್ತು ಈ ನಿರ್ಣಯ ತೆಗದುಕೊಂಡಿರುವುದಾಗಿ ಲಾಲೂ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ‘ಎಕ್ಸ್’ನಲ್ಲಿ ಲಾಲೂ ಪೋಸ್ಟ್ ಮಾಡಿದ್ದಾರೆ. ‘ನನ್ನ ಹಿರಿಯ ಪುತ್ರ ತೇಜ್ ಪ್ರತಾಪ್ನ ಕಾರ್ಯಚಟುವಟಿಕೆಗಳು ನಮ್ಮ ಕುಟುಂಬದ ಘನತೆಗೆ, ಪರಂಪರೆಗೆ ತಕ್ಕುದಾಗಿಲ್ಲ. ಆತನ ಬೇಜವಾಬ್ದಾರಿಯುತ ವರ್ತನೆಯಿಂದಾಗಿ ಅವನನ್ನು ಪಕ್ಷ ಹಾಗೂ ಕುಟುಂಬದಿಂದ ಉಚ್ಚಾಟಿಸುತ್ತಿದ್ದೇನೆ. ಇನ್ನು ಮುಂದೆ ಪಕ್ಷಕ್ಕಾಗಲಿ, ಕುಟುಂಬಕ್ಕಾಗಲಿ ಆತ ಸಂಬಂಧಿಸಿದವನಲ್ಲ. ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸುತ್ತಿದ್ದೇನೆ’ ಎಂದು ಬರೆದಿದ್ದಾರೆ.
‘ಮಹಿಳೆಯೊಬ್ಬರ ಜತೆಗೆ ನಾನು ಸಂಬಂಧ ಹೊಂದಿದ್ದೇನೆ’ ಎಂದು ತೇಜ್ ಪ್ರತಾಪ್ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು. ಈ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ತನ್ನ ಅಕೌಂಟ್ ಹ್ಯಾಕ್ ಆಗಿದೆ ಎಂದೂ ಹೇಳಿಕೊಂಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ತೇಜ್ ಅವರನ್ನು ಲಾಲೂ ಉಚ್ಚಾಟನೆ ಮಾಡಿದ್ದಾರೆ.
ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗಾ ಪ್ರಸಾದ್ ರಾಯ್ ಅವರ ಪುತ್ರಿ ಐಶ್ವರ್ಯ ಅವರನ್ನು ತೇಜ್ ವಿವಾಹವಾಗಿದ್ದು, ಈ ಹಿಂದೆ ಅವರ ಕೌಟುಂಬಿಕ ಕಲಹದಿಂದಲೂ ಲಾಲೂ ಮುಜಗರಕ್ಕೀಡಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.