ADVERTISEMENT

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಉಲ್ಲೇಖ: ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ಪಿಟಿಐ
Published 26 ಫೆಬ್ರುವರಿ 2026, 14:18 IST
Last Updated 26 ಫೆಬ್ರುವರಿ 2026, 14:18 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು(ಎನ್‌ಸಿಇಆರ್‌ಟಿ) ಪ್ರಕಟಿಸಿರುವ 8ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದ ಮರುಮುದ್ರಣ ಅಥವಾ ಡಿಜಿಟಲ್‌ ರೂಪದಲ್ಲಿ ಪ್ರಸಾರವನ್ನು ನಿಷೇಧಿಸಿ ಸುಪ್ರೀಂ ಕೋರ್ಟ್‌ ಗುರುವಾರ ಆದೇಶಿಸಿದೆ.

ಪಠ್ಯಪುಸ್ತಕದ ಮುದ್ರಿತ ಹಾಗೂ ಡಿಜಿಟಲ್‌ ರೂಪದಲ್ಲಿರುವ ಎಲ್ಲ ಪ್ರತಿಗಳನ್ನು ತಕ್ಷಣವೇ ಜಪ್ತಿ ಮಾಡುವಂತೆಯೂ ಸೂಚಿಸಿದೆ. ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಹೇಳಿರುವ ಅಂಶಗಳಿವು...

ಸುಪ್ರೀಂ ಕೋರ್ಟ್‌ ಹೇಳಿದ್ದೇನು?

* ನ್ಯಾಯಾಂಗವನ್ನು ಅವಹೇಳನ ಮಾಡುವುದಕ್ಕಾಗಿ ಬಹಳ ಲೆಕ್ಕಾಚಾರದಿಂದಲೇ ಇಂತಹ ಸಂಚು ರೂಪಿಸಿರುವಂತೆ ಕಂಡುಬರುತ್ತಿದೆ. ಈ ಕುರಿತು ನ್ಯಾಯಾಲಯ ನೀಡಿರುವ ನಿರ್ದೇಶನಗಳನ್ನು ಪಾಲನೆ ಮಾಡದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು

ADVERTISEMENT

* ನ್ಯಾಯಾಂಗಕ್ಕೆ ಶಾಶ್ವತವಾದ ಕಳಂಕ ತರುವ ಇಂತಹ ಅನುಚಿತ ವರ್ತನೆಯನ್ನು ಕ್ರಿಮಿನಲ್‌ ನಿಂದನೆ ಎಂದೇ ಪರಿಗಣಿಸಲಾಗುವುದು. ಇಂತಹ ನಡೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಜನರು ನ್ಯಾಯಾಂಗದಲ್ಲಿ ಇಟ್ಟಿರುವ ನಂಬಿಕೆಗೆ ಧಕ್ಕೆಯಾಗುತ್ತದೆ

* ಎನ್‌ಸಿಇಆರ್‌ಟಿ, ಕೇಂದ್ರ ಹಾಗೂ ರಾಜ್ಯಗಳ ಶಿಕ್ಷಣ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಪಠ್ಯಪುಸ್ತಕದ ಎಲ್ಲ ಪ್ರತಿಗಳನ್ನು ಜಪ್ತಿ ಮಾಡಬೇಕು. ಸಾರ್ವಜನಿಕರಿಗೆ ಪಠ್ಯಪುಸ್ತಕಗಳು ಲಭ್ಯವಾಗುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು

* ಮುನ್ನೆಚ್ಚರಿಕೆ ಕ್ರಮವಾಗಿ, ಈ ಪಠ್ಯಪುಸ್ತಕದ ಮರುಮುದ್ರಣ ಅಥವಾ ಡಿಜಿಟಲ್‌ ವಿಧಾನದ ಮೂಲಕ ಮರುಹಂಚಿಕೆ ಮಾಡದಂತೆ ಸಂಪೂರ್ಣ ನಿಷೇಧ ಹೇರಲಾಗಿದೆ

* ಈ ಪಠ್ಯಪುಸ್ತಕದ ಮುದ್ರಿತ ಪ್ರತಿ ಅಥವಾ ಡಿಜಿಟಲ್‌ ಆವೃತ್ತಿಯ ವಿತರಣೆಗೆ ನಡೆಸುವ ಯತ್ನಗಳನ್ನು ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂದೇ ಪರಿಗಣಿಸಿ, ಕ್ರಮ ಕೈಗೊಳ್ಳಲಾಗುವುದು

* ಎನ್‌ಸಿಇಆರ್‌ಟಿಯ 8ನೇ ತರಗತಿಯ ಈ ಪಠ್ಯಪುಸ್ತಕ ಕುರಿತು ಕೈಗೊಂಡಿರುವ ಕ್ರಮವು ನ್ಯಾಯಾಂಗ ಸೇರಿ ಯಾವುದೇ ಸಾರ್ವಜನಿಕ ಸಂಸ್ಥೆ ಕುರಿತ ನ್ಯಾಯಸಮ್ಮತ ಟೀಕೆ ಅಥವಾ ಪರಾಮರ್ಶೆಗೆ ಕಡಿವಾಣ ಹಾಕುವ ಉದ್ದೇಶ ಹೊಂದಿಲ್ಲ.

ಇಂತಹ ಪಿತೂರಿಗೆ ಕಾರಣರಾದವರನ್ನು ಪತ್ತೆ ಮಾಡುವುದು ನ್ಯಾಯಾಂಗ ವ್ಯವಸ್ಥೆಯ ಮುಖ್ಯಸ್ಥನಾದ ನನ್ನ ಕರ್ತವ್ಯ. ಈ ಬಗ್ಗೆ ಸಮಗ್ರ ತನಿಖೆ ಅಗತ್ಯ ಹಾಗೂ ತಪ್ಪಿತಸ್ಥರ ತಲೆದಂಡ ಆಗಲೇಬೇಕು
ಸೂರ್ಯಕಾಂತ್, ಮುಖ್ಯನ್ಯಾಯಮೂರ್ತಿ, ಸುಪ್ರೀಂ ಕೋರ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.