ADVERTISEMENT

ಶಾಸಕ ಸ್ಥಾನದಿಂದ ಮುಕುಲ್ ರಾಯ್ ಅನರ್ಹಗೊಳಿಸಲು ಮನವಿ: ಸ್ಪೀಕರ್‌ಗೆ ಸುವೇಂದು ಅರ್ಜಿ

ಪಿಟಿಐ
Published 18 ಜೂನ್ 2021, 15:12 IST
Last Updated 18 ಜೂನ್ 2021, 15:12 IST
ಸುವೇಂದು ಅಧಿಕಾರಿ
ಸುವೇಂದು ಅಧಿಕಾರಿ   

ಕೋಲ್ಕತ್ತ: ಬಿಜೆಪಿ ತೊರೆದು ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಮುಕುಲ್‌ ರಾಯ್‌ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕೋರಿ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಸ್ಪೀಕರ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಿದರು.

‘ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ, ಮುಕುಲ್‌ ರಾಯ್‌ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಅವರು ಟಿಎಂಸಿಗೆ ಸೇರ್ಪಡೆಯಾಗಿದ್ದು, ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಈಗ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕೋರಿ ಸ್ಪೀಕರ್‌ ಅವರಿಗೆ ಅರ್ಜಿ ಸಲ್ಲಿಸಲಾಗಿದೆ’ ಎಂದು ಬಿಜೆಪಿ ಶಾಸಕ ಮನೋಜ್‌ ಟಿಗ್ಗಾ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸ್ಪೀಕರ್ ಬಿಮನ್‌ ಬ್ಯಾನರ್ಜಿ, ‘ನಾನು ವಿಧಾನಸಭೆಗೆ ಇನ್ನೂ ಭೇಟಿ ನೀಡಿ, ಅರ್ಜಿಯನ್ನು ಪರಿಶೀಲಿಸಿಲ್ಲ. ಹೀಗಾಗಿ ಈ ಕುರಿತು ಏನೂ ಹೇಳುವುದಿಲ್ಲ’ ಎಂದರು.

ADVERTISEMENT

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ಮುಖಂಡರು, ‘ವಿಧಾನಸಭೆ ಚುನಾವಣೆಗೂ ಮುನ್ನ ಸುವೇಂದು ಅವರ ತಂದೆ ಶಿಶಿರ್‌ ಅಧಿಕಾರಿ ಅವರು ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸಂಸದ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಿ, ಮೇಲ್ಪಂಕ್ತಿ ಹಾಕುವಂತೆ ಸುವೇಂದು ಅಧಿಕಾರಿ ತಮ್ಮ ತಂದೆಯವರಿಗೆ ಮನವಿ ಮಾಡಲಿ’ ಎಂದು ತಿರುಗೇಟು ನೀಡಿದ್ದಾರೆ.

ಮುಕುಲ್‌ ರಾಯ್ ಅವರು ಕೃಷ್ಣಾನಗರ (ಉತ್ತರ) ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.