ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಅವರಿಗೆ ಸಂಬಂಧಪಡದೇ ಇರುವ ವಿಷಯದ ಬಗ್ಗೆ ಕಾಳಜಿ ತೋರಿಸುವ ಬದಲು ಅವರ ದೇಶವನ್ನು ನೋಡಿಕೊಳ್ಳಲಿ.ನಮ್ಮ ದೇಶ ಪ್ರಜಾಪ್ರಭುತ್ವ ಹೊಂದಿ 70 ವರ್ಷವಾಗಿದೆ.ನಮ್ಮನ್ನು ಹೇಗೆ ನೋಡಿಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ ಎಂದು ಬಾಲಿವುಡ್ ನಟ ನಾಸಿರುದ್ದೀನ್ ಶಾಪಾಕ್ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಲಾಹೋರ್ನಲ್ಲಿ 'ಪಂಜಾಬ್ ಸರ್ಕಾರದ 100 ದಿನದ ಸಾಧನೆ' ಕಾರ್ಯಕ್ರಮದಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್, ಅಲ್ಪ ಸಂಖ್ಯಾತರನ್ನು ಹೇಗೆ ನೋಡಿಕೊಳ್ಳಬೇಕೆಂದು ನಾವು ಮೋದಿ ಸರ್ಕಾರಕ್ಕೆ ತೋರಿಸಿಕೊಡುತ್ತೇವೆ. ಭಾರತದಲ್ಲಿ ಅಲ್ಪ ಸಂಖ್ಯಾತರನ್ನು ಇತರ ಪ್ರಜೆಗಳಿಗೆ ಸಮಾನವಾಗಿ ನೋಡಿಕೊಳ್ಳುತ್ತಿಲ್ಲ. ಗುಂಪುದಾಳಿ ಬಗ್ಗೆ ಶಾ ಅವರ ಈ ಹೇಳಿಕೆಯನ್ನು ಉಲ್ಲೇಖಿಸಿದ ಖಾನ್ ನಾವು ಅಲ್ಪ ಸಂಖ್ಯಾತರಿಗೆ ರಕ್ಷಣೆ ನೀಡುವ ಮೂಲಕ ಅವರ ಹೊಸ ಪಾಕಿಸ್ತಾನದಲ್ಲಿ ಅವರ ಹಕ್ಕುಗಳನ್ನು ಕಾಪಾಡುತ್ತೇವೆ ಎಂದಿದ್ದರು. ಖಾನ್ ಅವರ ಈ ಹೇಳಿಕೆಗೆ ಶಾ ಅವರು ಖಾರವಾಗಿಯೇ ಪ್ರತಿಕ್ರಿಯೆ ನೀಡಿರುವುದಾಗಿ ಸಂಡೇ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಕೆಲವು ದಿನಗಳ ಹಿಂದೆಯಷ್ಟೇ ದೇಶದಲ್ಲಿ ಹೆಚ್ಚುತ್ತಿರುವ ಗುಂಪು ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ನಾಸಿರುದ್ದೀನ್ ಶಾ, ‘ನನ್ನ ಮಕ್ಕಳನ್ನು ಯಾವುದೇ ನಿರ್ದಿಷ್ಟ ಧರ್ಮದ ಅನುಯಾಯಿಗಳನ್ನಾಗಿ ಬೆಳೆಸಿಲ್ಲ. ಅವರ ಬಗ್ಗೆ ನನಗೆ ಆತಂಕವಿದೆ’ ಎಂದು ‘ಕರ್ವಾನ್-ಎ-ಮೊಹಬ್ಬತ್ ಇಂಡಿಯಾ’ ಸಂಘಟನೆಯ ಯೂಟ್ಯೂಬ್ ಚಾನಲ್ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.