ADVERTISEMENT

ತಮಿಳುನಾಡು ಚುನಾವಣೆ: ತಿರುಚನಾಪಳ್ಳಿ ಡಿಸಿ, ಎಸ್‌ಪಿ ವರ್ಗಾವಣೆಗೆ ಇಸಿ ಆದೇಶ

ಏಜೆನ್ಸೀಸ್
Published 26 ಮಾರ್ಚ್ 2021, 5:44 IST
Last Updated 26 ಮಾರ್ಚ್ 2021, 5:44 IST
   

ಚೆನ್ನೈ:ಭಾರತೀಯ ಚುನಾವಣೆ ಆಯೋಗವು ತಿರುಚನಾಪಳ್ಳಿಯಜಿಲ್ಲಾಧಿಕಾರಿ, ಪೊಲೀಸ್‌ ಸೂಪರಿಂಟೆಂಡೆಂಟ್‌ (ಎಸ್‌ಪಿ) ಹಾಗೂ ಸಬ್‌-ಕಲೆಕ್ಟರ್‌ ಅವರನ್ನು ಚುನಾವಣೇತರ ಹುದ್ದೆಗಳಿಗೆ ನೇಮಿಸಿ ಆದೇಶ ಹೊರಡಿಸಿದೆ. ಚುನಾವಣಾ ಅಧಿಕಾರಿಗಳು ಜಿಲ್ಲೆಯಲ್ಲಿ ಗುರುವಾರ ₹ 1 ಕೋಟಿ ವಶಕ್ಕೆ ಪಡೆದಿದ್ದರು. ಅದಾದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಅಧಿಕಾರಿಗಳ ವರ್ಗಾವಣೆ ಸಂಬಂಧ ರಾಜ್ಯದಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವ ಚುನಾವಣಾ ಆಯೋಗವು, ವಿಶೇಷ ವೀಕ್ಷಕರ ವರದಿಯನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.ತಿರುಚನಾಪಳ್ಳಿ ಎಸ್‌ಪಿ ಪಿ.ರಾಜನ್‌, ಜಿಲ್ಲಾಧಿಕಾರಿ ಎಸ್‌.ಶಿವರಾಸು ಮತ್ತು ಶ್ರೀರಂಗಂನ ಉಪ ಜಿಲ್ಲಾಧಿಕಾರಿ ನಿಶಾಂತ್‌ ಕೃಷ್ಣ ಅವರನ್ನು ಚುನಾವಣೇತರ ಹುದ್ದೆಗಳಿಗೆ ವರ್ಗಾಯಿಸಲು ಅನುಮೋದನೆ ನೀಡಲಾಗಿದೆ ಎಂದೂ ಹೇಳಿದೆ.

ರಾಜನ್‌ ಅವರ ಜಾಗಕ್ಕೆ ಎ. ಮಯಿಲ್ವಗನನ್‌ ಹಾಗೂ ಶಿವರಾಸು ಸ್ಥಾನಕ್ಕೆ ಎಸ್‌. ದಿವ್ಯದರ್ಶಿನಿ ಅವರನ್ನು ನೇಮಿಸಲಾಗಿದೆ.

ADVERTISEMENT

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಏಪ್ರಿಲ್‌ 6 ರಂದು ಚುನಾವಣೆ ನಡೆಯಲಿದೆ. ಮೇ 2 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಕಾಂಗ್ರೆಸ್‌-ಡಿಎಂಕೆ ಮತ್ತು ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟಗಳ ನಡುವೆ ನೇರ ಹಣಾಹಣಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.