ನವದೆಹಲಿ: ಕ್ಷಯರೋಗದಿಂದ ಯುವ ಸಮೂಹದ ಸಾವಿನ ಸಂಭವನೀಯತೆಯ ಮುನ್ಸೂಚನೆ ನೀಡುವ ವ್ಯವಸ್ಥೆಯನ್ನು ತಮಿಳುನಾಡು ಸರ್ಕಾರ ಜಾರಿಗೊಳಿಸಿದೆ. ಈ ಉಪಕ್ರಮ ಕೈಗೊಂಡ ದೇಶದ ಮೊದಲ ರಾಜ್ಯವಾಗಿದೆ.
ರಾಜ್ಯದಾದ್ಯಂತ ಜಾರಿಗೊಳಿಸಿರುವ ‘ಟಿಬಿ ಸೇವಾ’ ಅಪ್ಲಿಕೇಷನ್ನೊಂದಿಗೆ ಇದನ್ನು ಸಂಯೋಜಿಸಲಾಗಿದ್ದು, ರೋಗ ಪತ್ತೆಗೆ ಅನುಕೂಲಕರವಾಗಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್) ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆಯು (ಎನ್ಐಇ) ಅಭಿವೃದ್ಧಿಪಡಿಸಿದ ಈ ಮಾದರಿಗೆ ಕಳೆದ ವಾರ ಚಾಲನೆ ನೀಡಲಾಗಿತ್ತು. ತೀವ್ರ ಅಸ್ವಸ್ಥರಾಗಿರುವ ಕ್ಷಯರೋಗಿಗಳಿಗೆ ರೋಗ ಪತ್ತೆಯಿಂದ ಹಿಡಿದು ಆಸ್ಪತ್ರೆಗೆ ದಾಖಲಾಗುವವರೆಗಿನ ಸರಾಸರಿ ಸಮಯವನ್ನು ಕಡಿಮೆ ಮಾಡುವ ಮೂಲಕ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸುವ ಗುರಿ ಹೊಂದಲಾಗಿದೆ ಎಂದು ತಮಿಳುನಾಡಿನ ಟಿಬಿ ಅಧಿಕಾರಿ ಡಾ.ಆಶಾ ಫ್ರೆಡೆರಿಕ್ ತಿಳಿಸಿದ್ದಾರೆ.
ವಯಸ್ಕರಲ್ಲಿ ಹೊಸದಾಗಿ ಅಪೌಷ್ಟಿಕತೆ, ಉಸಿರಾಟದ ತೊಂದರೆ, ತೀವ್ರ ಜ್ವರ, ತಲೆನೋವು, ಕೆಮ್ಮು, ಎದೆನೋವು, ದೇಹದ ತೂಕ ಇಳಿಕೆ ಮುಂತಾದ ಲಕ್ಷಣ ಕಂಡುಬಂದರೆ ಆ ಮಾಹಿತಿಯನ್ನು ಆರೋಗ್ಯ ಕಾರ್ಯಕರ್ತರು ‘ಟಿಬಿ ಸೇವಾ’ ಅಪ್ಲಿಕೇಷನ್ನಲ್ಲಿ ಸೇರಿಸುತ್ತಾರೆ. ಇದರಿಂದ ಆ ವ್ಯಕ್ತಿಯಲ್ಲಿ ರೋಗದ ತೀವ್ರತೆ ಎಷ್ಟಿದೆ ಎಂಬ ಮಾಹಿತಿ ತಿಳಿಯಲಿದೆ. ಇದರ ಆಧಾರದ ಮೇಲೆ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.