ಹೈದರಾಬಾದ್: ಆಗಸ್ಟ್ 1ರ ಬಕ್ರಿದ್ ಆಚರಣೆಗೆ ಹಸುಗಳನ್ನು ಬಲಿ ಕೊಡದಂತೆ ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಮಹಮೂದ್ ಅಲಿ ಶನಿವಾರ ಮುಸ್ಲಿಮರಲ್ಲಿ ಮನವಿ ಮಾಡಿದ್ದಾರೆ.
ಎಲ್ಲಾ ಧರ್ಮಗಳನ್ನು ಗೌರವದಿಂದ ಪರಿಗಣಿಸುವ ಜಾತ್ಯತೀತ ತತ್ವಗಳಿಗೆ ತೆಲಂಗಾಣ ಹೆಸರುವಾಸಿಯಾಗಿದೆ. ಬಕ್ರಿದ್ ಅನ್ನು ಜಾತ್ಯತೀತತೆಯ ಮನೋಭಾವದಿಂದಲೇ ಆಚರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಆಡಳಿತದಲ್ಲಿಯೂ ಜಾತ್ಯತೀತ ತತ್ವಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ನಿಜಾಮ್ ಮತ್ತು ಕುತುಬ್ ಶಾಹಿ ಆಳ್ವಿಕೆಯಲ್ಲಿಯೂ ಜಾತ್ಯತೀತತೆ ಅಸ್ತಿತ್ವದಲ್ಲಿತ್ತು. ಐತಿಹಾಸಿಕ ಚಾರ್ಮಿನಾರ್ನ ನಾಲ್ಕು ಮಿನಾರ್ಗಳು ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಧರ್ಮದ ಸಂಕೇತಗಳಾಗಿ ಕಂಡುಬರುತ್ತವೆ. ಇವೆಲ್ಲವೂ ಸಮಾನ ಗೌರವವನ್ನು ಸೂಚಿಸುತ್ತವೆ ಎಂದು ಅವರು ಪ್ರತ್ಯೇಕ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಬಕ್ರಿದ್ ಆಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಡಿಜಿಪಿ ಎಂ ಮಹೇಂದರ್ ರೆಡ್ಡಿ ಅವರೊಂದಿಗೆ ಸಭೆ ನಡೆಸಿದ ಅಲಿ, ಹಸುಗಳನ್ನು ಹಿಂದೂಗಳು ಪೂಜಿಸುವುದರಿಂದ ಅವುಗಳನ್ನು ಬಲಿ ನೀಡಬಾರದು ಎಂದು ಹೇಳಿದರು. ಕುರಿ, ಮೇಕೆ ಸೇರಿದಂತೆ ಬೇರೆ ಇತರೆ ಪ್ರಾಣಿಗಳನ್ನು ಬಲಿ ಕೊಡಲು ಅವಕಾಶವಿದೆ ಎಂದೂ ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಪ್ರಾರ್ಥನೆಯ ಸಮಯದಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಪ್ರಾಣಿಗಳ ಮಾರಾಟ ಮತ್ತು ಖರೀದಿಯ ಸಮಯದಲ್ಲೂ ಸುರಕ್ಷತೆ ಪಾಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.