ಮೀರಠ್ (ಉತ್ತರ ಪ್ರದೇಶ): ಸೌರಭ್ ರಜಪೂತ್ ಕೊಲೆ ಪ್ರಕರಣ ಕುರಿತು ಆರೋಪಿ ಮುಸ್ಕಾನ್ ರಸ್ತೋಗಿಯ (ಸೌರಭ್ ಪತ್ನಿ) ಪೋಷಕರಿಗೆ ಮಾರ್ಚ್ 18ಕ್ಕೂ ಮೊದಲೇ ತಿಳಿದಿತ್ತು ಎಂದು ಮೃತನ ತಾಯಿ ಆರೋಪಿಸಿದ್ದಾರೆ.
‘ಕೊಲೆ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಮುಸ್ಕಾನ್ ಪೋಷಕರು ಹೇಳಿರುವುದರಲ್ಲಿ ಸತ್ಯಾಂಶವಿಲ್ಲ. ಅವರು ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ’ ಎಂದು ಸೌರಭ್ ತಾಯಿ ರೇಣು ದೇವಿ ದೂರಿದ್ದಾರೆ.
‘ಮಾರ್ಚ್ 4ರಂದು ಸೌರಭ್ನನ್ನು ಇರಿದು ಕೊಂದಿದ್ದಾಗಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಒಪ್ಪಿಕೊಂಡಿದ್ದಾರೆ. ಕೊಲೆ ಬಳಿಕ ಇಬ್ಬರೂ ಸೇರಿ ದೇಹವನ್ನು ಕತ್ತರಿಸಿ, ಅವಶೇಷಗಳನ್ನು ಡ್ರಮ್ನಲ್ಲಿರಿಸಿ, ಸಿಮೆಂಟ್ನಿಂದ ಮುಚ್ಚಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪ್ರಕರಣ ಸಂಬಂಧ ಈ ಇಬ್ಬರನ್ನೂ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
‘ಸೌರಭ್ರ ಆರು ವರ್ಷದ ಪುತ್ರಿಗೂ ತನ್ನ ತಂದೆ ಸಾವಿನ ಬಗ್ಗೆ ತಿಳಿದಿತ್ತು. ಬಾಲಕಿಯು ತಂದೆ ಡ್ರಮ್ನಲ್ಲಿ ಇದ್ದಾರೆ ಎಂದು ನೆರೆ ಹೊರೆಯವರ ಬಳಿ ಹೇಳಿದ್ದಳು’ ಎಂದು ರೇಣು ದೇವಿ ಪ್ರತಿಪಾದಿಸಿದ್ದಾರೆ. ಆದರೆ ಇದನ್ನು ಪೊಲೀಸರು ಅಲ್ಲಗಳೆದಿದ್ದಾರೆ.
ಸೌರಭ್ನನ್ನು ಕೊಲ್ಲಲು ಮುಸ್ಕಾನ್ 2023ರ ನವೆಂಬರ್ನಿಂದಲೇ ಯೋಜನೆ ರೂಪಿಸಿದ್ದಳು. ಈ ಕೃತ್ಯಕ್ಕೆ ಸಾಹಿಲ್ ನೆರವು ಪಡೆಯಲು, ಆತನನ್ನು ಮೂಢನಂಬಿಕೆಯಲ್ಲಿ ಕೆಡವಿದ್ದಳು. ತನ್ನ ಸಹೋದರನ ಹೆಸರಿನಲ್ಲಿ ನಕಲಿ ಸ್ನ್ಯಾಪ್ಚಾಟ್ ಐಡಿ ರಚಿಸಿದ್ದ ಮುಸ್ಕಾನ್, ಸಾಹಿಲ್ನ ಮೃತ ತಾಯಿಯಂತೆ ನಟಿಸಿದ್ದಳು. ‘ನಿನ್ನ ಮೃತ ತಾಯಿ ಸ್ನ್ಯಾಪ್ಚಾಟ್ನಲ್ಲಿ ಕಾಣಿಸಿಕೊಂಡಿದ್ದು, ಸೌರಭ್ನನ್ನು ಕೊಲ್ಲಲು ಸಂದೇಶ ಕಳುಹಿಸಿದ್ದಾಳೆ’ ಎಂದು ಸಾಹಿಲ್ ಬಳಿ ಹೇಳಿದ್ದ ಮುಸ್ಕಾನ್, ಆತನನ್ನು ನಂಬಿಸಿದ್ದಳು ಎಂದು ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಂ ಸಿಂಗ್ ವಿವರಿಸಿದ್ದಾರೆ.
ಸೌರಭ್ ಲಂಡನ್ನಿಂದ ಫೆಬ್ರುವರಿಯಲ್ಲಿ ಹಿಂದಿರುಗುವ ಮೊದಲು ಮುಸ್ಕಾನ್, ಕೋಳಿ ಕತ್ತರಿಸುವ ನೆಪದಲ್ಲಿ ಚಾಕುಗಳನ್ನು ಖರೀದಿಸಿದ್ದಳು. ಜತೆಗೆ ನಿದ್ರಾ ಮಾತ್ರೆಗಳನ್ನು ಖರೀದಿಸಿದ್ದಳು.
ಸೌರಭ್ ಕೊಲೆ ಬಳಿಕ ಆತನ ಕುಟುಂಬದವರು ಹುಡಕಲು ಯತ್ನಿಸುವುದಿಲ್ಲ ಎಂದು ಮುಸ್ಕಾನ್ ತಿಳಿದಿದ್ದರು. ಏಕೆಂದರೆ ಸೌರಭ್ ಎರಡು ವರ್ಷಗಳಿಂದ ತನ್ನ ಕುಟುಂಬದ ಸದಸ್ಯರ ಜತೆ ನಿಯಮಿತವಾಗಿ ಸಂಪರ್ಕದಲ್ಲಿ ಇರಲಿಲ್ಲ. ಮುಸ್ಕಾನ್ ಜತೆಗಿನ ವಿವಾಹದ ಬಳಿಕ ಸೌರಭ್ ಕುಟುಂಬದವರು ಕೋಪಗೊಂಡಿದ್ದರು. ಹೀಗಾಗಿ ಪತಿಯ ಬಗ್ಗೆ ಅವರ ಪೋಷಕರು ವಿಚಾರಿಸುವುದಿಲ್ಲ ಎಂದು ಆರೋಪಿ ನಂಬಿದ್ದರು ಎಂದು ಎಸ್ಪಿ ಹೇಳಿದ್ದಾರೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮುಸ್ಕಾನ್, ಸಾಹಿಲ್ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಯೋಜಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಾಲ್ಯ ಸ್ನೇಹಿತರು
ಮುಸ್ಕಾನ್ ಮತ್ತು ಸಾಹಿಲ್ ಬಾಲ್ಯ ಸ್ನೇಹಿತರು. ಒಂದರಿಂದ ಎಂಟನೇ ತರಗತಿವರೆಗೆ ಜತೆಯಲ್ಲೇ ಓದಿದ್ದರು. ಸಹಪಾಠಿಗಳು ರಚಿಸಿದ ವಾಟ್ಸ್ಆ್ಯಪ್ ಗ್ರೂಪ್ನಿಂದ ಇವರು 2019ರಲ್ಲಿ ಪುನಃ ಸಂಪರ್ಕಕಕ್ಕೆ ಬಂದಿದ್ದರು. ಈ ವೇಳೆಗಾಗಲೇ ಮುಸ್ಕಾನ್ ಅವರಿಗೆ ಸೌರಭ್ ಜತೆ ವಿವಾಹವಾಗಿ ಮೂರು ವರ್ಷಗಳಾಗಿದ್ದವು. ಸಹಪಾಠಿಗಳು ಮೀರಠ್ನಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಇಬ್ಬರೂ ಭೇಟಿಯಾಗಿದ್ದರು. ಅಲ್ಲಿ ಅವರ ನಡುವೆ ಪ್ರೇಮಾಂಕುರವಾಗಿತ್ತು. ತಮ್ಮ ಈ ಸಂಬಂಧಕ್ಕೆ ಸೌರಭ್ ಅಡ್ಡಿ ಆಗುತ್ತಾರೆ ಎಂದು ಪರಿಗಣಿಸಿದ್ದ ಮುಸ್ಕಾನ್ ಕೊಲೆಗೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚೌಧರಿ ಚರಣ್ ಸಿಂಗ್ ಜಿಲ್ಲೆಯ ಜೈಲಿನಲ್ಲಿ ಮುಸ್ಕಾನ್ ಮತ್ತು ಸಾಹಿಲ್ ಶುಕ್ಲಾ ಪ್ರತ್ಯೇಕ ಬ್ಯಾರಕ್ನಲ್ಲಿ ಇರಿಸಲಾಗಿದೆ. ಜೈಲಿನಲ್ಲಿ ಮೌನಕ್ಕೆ ಜಾರಿರುವ ಮುಸ್ಕಾನ್ ಯಾರೊಂದಿಗೂ ಸಂವಹನ ನಡೆಸಲಿಲ್ಲ ನೀಡಿದ ಆಹಾರವನ್ನೂ ಸೇವಿಸಲಿಲ್ಲ ಮತ್ತು ರಾತ್ರಿಯಿಡೀ ಅಳುತ್ತಿದ್ದಳು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.