ಭೋಪಾಲ್ : ಅಗಾಗ ಜನವಸತಿ ಪ್ರದೇಶಕ್ಕೆ ನುಗ್ಗುವ ಚಾಳಿ ಹೊಂದಿರುವ ಹುಲಿಯೊಂದನ್ನು ಈಗ ಇಲ್ಲಿನ ವನ್ವಿಹಾರ್ ರಾಷ್ಟ್ರೀಯ ಉದ್ಯಾನಕ್ಕೆ ಕರೆತಂದು ಪ್ರತ್ಯೇಕವಾಸದಲ್ಲಿಡಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
‘ಸರನ್‘ ಹೆಸರಿನ ಈ ಹುಲಿಯನ್ನು ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ 2018ರ ಡಿಸೆಂಬರ್ನಲ್ಲಿ ಮೊದಲ ಬಾರಿ ಸೆರೆಹಿಡಿದು ಬೋನಿಗೆ ಹಾಕಲಾಗಿತ್ತು.
ಈ ಹುಲಿ ನೆರೆಯ ಮಹಾರಾಷ್ಟ್ರದ ಜನವಸತಿ ಪ್ರದೇಶಕ್ಕೆ ನುಗ್ಗಿತ್ತು. ಗಡಿ ಜಿಲ್ಲೆ ಅಮರಾವತಿಯಲ್ಲಿ ಅಕ್ಟೋಬರ್ನಲ್ಲಿ ಇಬ್ಬರನ್ನು ಕೊಂದುಹಾಕಿತ್ತು, ನಂತರ ಮಧ್ಯಪ್ರದೇಶದ ಅರಣ್ಯದಲ್ಲಿ ಓಡಾಡಿಕೊಂಡಿದ್ದ ಈ ಹುಲಿ, ಗಡಿಗೆ ಹೊಂದಿಕೊಂಡ ಬೇತುಲ್ನ ಸರನಿ ಎಂಬಲ್ಲಿ ಮತ್ತೆ ಜನವಸತಿ ಪ್ರದೇಶದಿಂದ ಕಾಣಿಸಿಕೊಂಡಿತ್ತು. ಅದನ್ನು ಅಲ್ಲಿಂದ ರಕ್ಷಿಸಲಾಗಿತ್ತು ಎಂದು ವನ್ವಿಹಾರ್ ರಾಷ್ಟ್ರೀಯ ಉದ್ಯಾನದ ಅಧಿಕಾರಿ ತಿಳಿಸಿದ್ದಾರೆ.
ಸಹಜ ಪರಿಸರಕ್ಕೆ ಹೊಂದಿಕೊಳ್ಳಲು ಅದಕ್ಕೆ ಅವಕಾಶ ನೀಡಿ, ಸಾತ್ಪುರದ ಹುಲಿಸಂರಕ್ಷಿತ ಪ್ರದೇಶಕ್ಕೆ ಬಿಡಲಾಗಿತ್ತು. ಆದರೆ ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ನುಸುಳುವ ಚಾಳಿಯನ್ನು ಈ ಹುಲಿರಾಯ ಬಿಟ್ಟಿರಲಿಲ್ಲ. 2019ರ ಫೆಬ್ರುವರಿ 10ರಂದು ಮತ್ತೊಮ್ಮೆ ಸರನಿ ಗ್ರಾಮದಲ್ಲಿ ಕಾಣಿಸಿಕೊಂಡಾಗ ಅದನ್ನು ಸೆರೆಹಿಡಿದು ಕಾನ್ಹಾದ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಎನ್ಕ್ಲೋಷರ್ನಲ್ಲಿ ಬಿಡಲಾಗಿತ್ತು.
‘ಹುಲಿಯನ್ನು ಪ್ರಕೃತಿಸಹಜ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುವ ಯತ್ನಗಳು ವಿಫಲವಾದ ಕಾರಣ ಅದನ್ನು ಶನಿವಾರ ಕಾನ್ಹಾದಿಂದ ವನ್ವಿಹಾರ್ ನ್ಯಾಷನಲ್ ಪಾರ್ಕ್ಗೆ ಕರೆತರಲಾಗಿದ್ದು, ಸದ್ಯ ಪ್ರತ್ಯೇಕವಾಸದಲ್ಲಿ ಇಡಲಾಗಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದರೊಡನೆ ವನ್ವಿಹಾರ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳ ಸಂಖ್ಯೆ 14ಕ್ಕೆ ಏರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.