ADVERTISEMENT

ಹರಿಯಾಣ: ಟಿಕಾಯತ್‌ ನೇತೃತ್ವದಲ್ಲಿ ರೈತರ ಧರಣಿ

ಪಿಟಿಐ
Published 6 ಜೂನ್ 2021, 18:13 IST
Last Updated 6 ಜೂನ್ 2021, 18:13 IST
ಟಿಕಾಯತ್
ಟಿಕಾಯತ್   

ಟೊಹಾನಾ (ಹರಿಯಾಣ): ಬಂಧಿತರೈತರ ಬಿಡುಗಡೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್‌ ನೇತೃತ್ವದಲ್ಲಿ ಭಾರಿ ಸಂಖ್ಯೆಯಲ್ಲಿ ರೈತರು ಫತೇಹಾಬಾದ್‌ನ ಸದರ್ ಪೊಲೀಸ್‌ ಠಾಣೆ ಮುಂಭಾಗ ಭಾನುವಾರ ಧರಣಿ ಮುಂದುವರಿಸಿದ್ದಾರೆ.

ಜನನಾಯಕ ಜನತಾ ಪಕ್ಷದ ಶಾಸಕ ದೇವೇಂದ್ರ ಸಿಂಗ್‌ ಬಬ್ಲಿ ನಿವಾಸಕ್ಕೆ ಮುತ್ತಿಗೆ ಹಾಕಲು ರೈತರು ಬುಧವಾರ ರಾತ್ರಿ ಯತ್ನಿಸಿದ್ದರು. ಇದಕ್ಕೆ ಸಂಬಂಧಿಸಿ ವಿಕಾಸ್‌ ಮತ್ತು ರವಿ ಆಜಾದ್‌ ಅವರನ್ನು ಪೊಲೀಸರು ಬಂಧಿಸಿದ್ದರು.

‘ಬಂಧಿತ ರೈತರ ಬಿಡುಗಡೆಯಾಗುವವರೆಗೂ ಪ್ರತಿಭಟನೆನಿರತ ರೈತರು ಇಲ್ಲಿಂದ ಕದಲುವುದಿಲ್ಲ.ನಾವು ಬಂಧನಕ್ಕೆ ಸಿದ್ಧರಿದ್ದೇವೆ. ನಮ್ಮನ್ನೂ ಬಂಧಿಸಿ ಇಲ್ಲವೇ ಬಂಧಿತರನ್ನು ಬಿಡುಗಡೆಗೊಳಿಸಿ’ ಎಂದು ಟಿಕಾಯತ್‌ ಆಗ್ರಹಿಸಿದ್ದಾರೆ.

ADVERTISEMENT

ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಶಾಸಕ ಬಬ್ಲಿ ವಿರುದ್ಧ ಪ್ರಕರಣ ದಾಖಲಿಸುವಂತೆ ಪ್ರತಿಭಟನೆನಿರತ ರೈತರು ಈ ಹಿಂದೆ ಆಗ್ರಹಿಸಿದ್ದರು. ಬಳಿಕ, ಬಬ್ಲಿ ತಮ್ಮ ಅನುಚಿತ ವರ್ತನೆಗೆ ವಿಷಾದ ವ್ಯಕ್ತಪಡಿಸಿದ್ದರು.

ರೈತರು ಶನಿವಾರ ರಾತ್ರಿ ಇಲ್ಲಿನ ಬೆಳೆ ಮಾರುಕಟ್ಟೆಯಲ್ಲಿ ಜಮಾಯಿಸಿ ನಂತರ ಪೊಲೀಸ್‌ ಠಾಣೆಯತ್ತ ಸಾಗಿದ್ದರು.

‘ಸರ್ಕಾರವು ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೆ ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾಯ್ದೆ ಜಾರಿಗೊಳಿಸುವವರೆಗೆ ಕೃಷಿ ಕಾನೂನುಗಳ ವಿರುದ್ಧದ ಆಂದೋಲನ ಮುಂದುವರಿಯಲಿದೆ.ರೈತರ ಆಂದೋಲನವನ್ನು ದೆಹಲಿಯ ಗಡಿಯಿಂದ ಹರಿಯಾಣದ ರೋಹ್ಟಕ್‌–ಜಿಂದ್‌ ಗಡಿಗೆ ಸ್ಥಳಾಂತರಿಸಲು ಸರ್ಕಾರ ಬಯಸಿದೆ. ಆದರೆ ಇದು ಯಶಸ್ವಿಯಾಗಲು ಬಿಡುವುದಿಲ್ಲ’ ಎಂದು ಟಿಕಾಯತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.