
ತಿರುಪತಿ: ತಿರುಪತಿ ಲಾಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿಶೇಷ ತನಿಖಾ ತಂಡದ (ಎಸ್ಐಟಿ) ವರದಿ ಪರಿಶೀಲನೆಗಾಗಿ ಏಕಸದಸ್ಯ ಸಮಿತಿ ರಚಿಸಿರುವುದು ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಂಗ ಪ್ರಕ್ರಿಯೆಗೆ ಮಾಡಿರುವ ಅಪಮಾನ ಎಂದು ವೈಎಸ್ಆರ್ಸಿಪಿ ಹಿರಿಯ ನಾಯಕ, ಟಿಟಿಡಿಯ ಮಾಜಿ ಮುಖ್ಯಸ್ಥ ಬಿ.ಕರುಣಾಕರ ರೆಡ್ಡಿ ಹೇಳಿದರು.
‘ಸಮಿತಿ ರಚನೆ ಮೂಲಕ ಹೊಸ ರಾಜಕೀಯ ನಾಟಕಕ್ಕೆ ಮುನ್ನುಡಿ ಬರೆಯಲಾಗಿದೆ’ ಎಂದು ಹೇಳಿದರು.
ವೈಕುಂಠ ಏಕಾದಶಿ ದಿನ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ರಚನೆಯಾದ ಏಕಸದಸ್ಯ ಸಮಿತಿ ಉಲ್ಲೇಖಿಸಿ, ‘ಇಂಥ ಸಮಿತಿಗಳು ಯಾರನ್ನು ರಕ್ಷಿಸಬೇಕು ಮತ್ತು ಯಾರನ್ನು ಹೊಣೆ ಮಾಡಬೇಕು ಎಂದು ಪೂರ್ವನಿರ್ಧಾರಿತವಾಗಿರುತ್ತವೆ’ ಎಂದು ದೂರಿದರು.
‘ಕಲಬೆರಕೆ ತುಪ್ಪ ಬಳಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಮತ್ತು ಇತರ ವೈಎಸ್ಆರ್ಸಿಪಿ ನಾಯಕರನ್ನು ಹೊಣೆಗಾರರನ್ನಾಗಿ ಮಾಡುವ ಉದ್ದೇಶದಿಂದ ಸಮಿತಿ ರಚಿಸಲಾಗಿದೆ’ ಎಂದು ಆರೋಪಿಸಿದರು.
ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರವು, ನಿವೃತ್ತ ಐಎಎಸ್ ಅಧಿಕಾರಿ ದಿನೇಶ್ ಕುಮಾರ್ ಅವರ ನೇತೃತ್ವದ ಏಕಸದಸ್ಯ ಸಮಿತಿಯನ್ನು ಶುಕ್ರವಾರ ರಚನೆ ಮಾಡಿದೆ.
ಸುಪ್ರೀಂ ಕೋರ್ಟ್ ನೇಮಿಸಿರುವ ಎಸ್ಐಟಿ ತನಿಖೆ ನಡೆಸಿ ದೋಷಾರೋಪಪಟ್ಟಿ ಸಲ್ಲಿಕೆ ಮಾಡಿದ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.