ADVERTISEMENT

ಉಲ್ಲಂಘನೆ: ನೌಕಾಪಡೆ ಗುಂಡೇಟಿಗೆ ತಮಿಳುನಾಡಿನ ಮೀನುಗಾರನಿಗೆ ಗಾಯ

ಘಟನೆ ಕುರಿತು ಸ್ಟಾಲಿನ್‌ನಿಂದ ಮೋದಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 20:44 IST
Last Updated 21 ಅಕ್ಟೋಬರ್ 2022, 20:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆ‌ನ್ನೈ: ಭಾರತ–ಶ್ರೀಲಂಕಾ ಕರಾವಳಿ ಗಡಿ ರೇಳೆ ಬಳಿ ಪಹರೆಗೆ ನಿಯೋಜನೆಗೊಂಡಿದ್ದ ಭಾರತೀಯ ನೌಕಾಪಡೆ ಸಿಬ್ಬಂದಿ ಹಾರಿಸಿದ ಗುಂಡು ತಗುಲಿ ತಮಿಳುನಾಡಿನ ಮೀನುಗಾರರೊಬ್ಬರು ಗಾಯಗೊಂಡಿದ್ದಾರೆ.

ಪಲ್ಕ್‌ ಖಾರಿಯಲ್ಲಿ ಮೀನು ಹಿಡಿಯಲು ದೋಣಿಯಲ್ಲಿ ತೆರಳಿದ್ದ ಮೀನುಗಾರನಿಗೆ ದೋಣಿ ನಿಲ್ಲಿಸುವಂತೆ ನೌಕಾಪಡೆ ಸಿಬ್ಬಂದಿ ಸೂಚನೆ ನೀಡಿದರು. ಆದರೆ ಅವರು ದೋಣಿ ನಿಲ್ಲಿಸದಿದ್ದದ್ದನ್ನು ಕಂಡು ಅದು ಶ್ರೀಲಂಕಾ ಮೀನುಗಾರರ ದೋಣಿ ಇರಬಹುದು ಎಂದು ಭಾವಿಸಿ ದೋಣಿ ಕಡೆಗೆ ಗುಂಡು ಹಾರಿಸಿದರು. ಗುಂಡೇಟು ತಿಂದ ಮೀನುಗಾರ ಕಾವೇರಿ ಪ್ರಸ್ಥಭೂಮಿ ಪ್ರದೇಶದ ನಿವಾಸಿ ವೀರವಲ್‌ ಎಂದು ಬಳಿಕ ತಿಳಿದುಬಂದಿದೆ.

ಕೂಡಲೇ ವೀರವಲ್‌ಗೆ ಪ್ರಥಮ ಚಿಕಿತ್ಸೆ ನೀಡಿ ಸೇನಾ ಹೆಲಿಕಾಪ್ಟರ್‌ ಮೂಲಕ ರಾಮ್‌ನಾದ್‌ನಲ್ಲಿಯ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಅವರಿಗೆ ಮದುರೈ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ನೌಕಾಪಡೆ ಪ್ರಕಟಣೆ ಹೊರಡಿಸಿದೆ.

ADVERTISEMENT

ಮೋದಿಗೆ ಸ್ಟಾಲಿನ್‌ ಪತ್ರ: ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಭಾರತೀಯ ಮೀನುಗಾರರ ಕುರಿತುಭಾರತೀಯ ಕರಾವಳಿ ಗಡಿಯೊಳಗೆ ಅತ್ಯಂತ ಎಚ್ಚರ ವಹಿಸುವಂತೆ ಭದ್ರತಾ ಪಡೆಗಳಿಗೆ ಸೂಚನೆ ನೀಡುವಂತೆ ಅವರು ಮನವಿ ಮಾಡಿದ್ದಾರೆ.

‘ಘಟನೆ ಕುರಿತು ನನಗೆ ಅತೀವ ನೋವಾಗಿದೆ. ಶ್ರೀಲಂಕಾ ನೌಕಾಪಡೆಯಿಂದಾಗಿ ಭಾರತೀಯ ಮೀನುಗಾರರು ಅನುಭವಿಸುವ ಸಂಕಟ ನಿಮಗೆ ತಿಳಿದೇ ಇದೆ. ಅವರಂತೆಯೇ ಭಾರತೀಯ ಪಡೆಗಳೂ ವರ್ತಿಸಿದರೆ ಮೀನುಗಾರರಲ್ಲಿ ಅಭದ್ರತೆ ಮತ್ತು ಹತಾಶೆ ಮನೆ ಮಾಡುತ್ತದೆ’ ಎಂದು ಸ್ಟಾಲಿನ್‌ ಪತ್ರದಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.