ಚೆನ್ನೈ: ಅಧ್ಯಾತ್ಮ ಗುರು ಜಗ್ಗಿ ವಾಸುದೇವ್ ಮತ್ತು ತಮಿಳುನಾಡಿನ ನೂತನ ಹಣಕಾಸು ಸಚಿವ ಪಿ.ಟಿ.ಆರ್.ಪಳನಿವೇಲ್ ತ್ಯಾಗರಾಜನ್ ನಡುವೆ ಟ್ವಿಟರ್ ಜಾಲತಾಣದಲ್ಲಿ ‘ಟೆಂಪಲ್ ವಾರ್’ ಶುರುವಾಗಿದೆ.
‘ತಮಿಳುನಾಡಿನಲ್ಲಿ ದೇವಸ್ಥಾನಗಳನ್ನು ಸರ್ಕಾರದಿಂದ ಮುಕ್ತಗೊಳಿಸಿ’ ಎಂದು ಜಗ್ಗಿ ವಾಸುದೇವ್ ಅವರು ಹಲವು ತಿಂಗಳಿನಿಂದ ಅಭಿಯಾನ ಕೈಗೊಂಡಿದ್ದರೆ, ವಾಸುದೇವ್ ಅವರು ಪ್ರಚಾರದ ಬೆನ್ನತ್ತಿದ್ದಾರೆ ಎಂದು ಸಚಿವ ತ್ಯಾಗರಾಜನ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ತಮಿಳು ಮಾಧ್ಯಮಕ್ಕೆ ಕಳೆದ ಮಾರ್ಚ್ನಲ್ಲಿ ನೀಡಿದ್ದ ಸಂದರ್ಶನದಲ್ಲಿ ತ್ಯಾಗರಾಜನ್ ಅವರು, ತಮಿಳುನಾಡಿನ ದೇವಸ್ಥಾನಗಳಿಗೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದರು. ಡಿಎಂಕೆಯ ಹಲವು ಟ್ವಿಟರ್ ಖಾತೆಗಳಲ್ಲಿ ಹಂಚಿಕೆ ಮಾಡಲಾಗಿತ್ತು. ಕಳೆದ ವಾರ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿಯೂ ತನ್ನ ನಿಲುವು ಪುನರುಚ್ಚರಿಸಿದ್ದರು.
ದೇವಸ್ಥಾನಗಳ ಆಡಳಿತ ಸರ್ಕಾರದ ಸುಪರ್ದಿಯಲ್ಲಿಯೇ ಇರಬೇಕು ಎಂದು ಪ್ರತಿಪಾದಿಸಿದ್ದ ತ್ಯಾಗರಾಜನ್ ಅವರು, ವಾಸುದೇವ್ ಅವರ ಪ್ರಚಾರದ ಬೆನ್ನತ್ತಿದ್ದಾರೆ. ಹೆಚ್ಚಿನ ಹಣ ಗಳಿಸಲು ಹೊಸ ಮಾರ್ಗದ ಹುಡುಕಾಟದಲ್ಲಿದ್ದಾರೆ ಎಂದು ಟೀಕಿಸಿದ್ದರು.
ಇದಕ್ಕೆ ಅಧ್ಯಾತ್ಮ ಗುರುವಿನ ಬೆಂಬಲಿಗರು ಮತ್ತು ಬಿಜೆಪಿ ನಾಯಕರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಹಣಕಾಸು ಸಚಿವರ ಟ್ವಿಟರ್ ಖಾತೆಯಲ್ಲಿ ಈ ಹೇಳಿಕೆ ಸಾಕಷ್ಟು ಜನರು ಉತ್ತರಿಸಿದ್ದು, ಇದರಲ್ಲಿ ಪರ–ವಿರೋಧದ ಪ್ರತಿಕ್ರಿಯೆಗಳಿದ್ದಾವೆ.
ವಾಸುದೇವ್ ಅವರ ಅಭಿಯಾನವನ್ನು ಬಿಜೆಪಿ ಬೆಂಬಲಿಸುತ್ತಿದೆ. ತಮಿಳುನಾಡಿನಲ್ಲಿ 44,000ಕ್ಕೂ ಅಧಿಕ ದೇವಾಲಯಗಳಿವೆ. ಇದನ್ನು ಸರ್ಕಾರದ ಆಡಳಿತದಿಂದ ಮುಕ್ತಗೊಳಿಸಬೇಕು ಎಂಬುದು ವಾಸುದೇವ್ ಅವರ ಅಭಿಯಾನದ ಆಗ್ರಹ.
ಈ ಕುರಿತು ಹೇಳಿಕೆ ನೀಡಿರುವ ವಾಸುದೇವ್ ಅವರ ಇಶಾ ಫೌಂಡೇಷನ್, ತ್ಯಾಗರಾಜನ್ ಅವರ ಹೇಳಿಕೆ ದುರದೃಷ್ಟಕರ. ಅಸಂಖ್ಯಾತ ಇಶಾ ಸೇವಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಪ್ರತಿಕ್ರಿಯಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.