ನವದೆಹಲಿ: ಕೋವಿಡ್ ಟೂಲ್ಕಿಟ್ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಟ್ವಿಟರ್ ಇಂಡಿಯಾಕ್ಕೆ ನೋಟಿಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, 'ಸತ್ಯಕ್ಕೆ ಭಯವಿರುವುದಿಲ್ಲ' ಎಂದಿದ್ದಾರೆ.
ದೆಹಲಿ ಮತ್ತು ಗುರುಗ್ರಾಮದಲ್ಲಿನ ಟ್ವಿಟರ್ ಕಚೇರಿಗೆ ಪೊಲೀಸರ ಎರಡು ತಂಡಗಳು ಭೇಟಿ ನೀಡಿದ ವಿಚಾರವಾಗಿ ಸೋಮವಾರ ಕಾಂಗ್ರೆಸ್, ಇದೊಂದು ಹೇಡಿತನದ ದಾಳಿಯಾಗಿದ್ದು, 'ಬಿಜೆಪಿ ನಾಯಕರ ಮೋಸದ ಟೂಲ್ಕಿಟ್ ಅನ್ನು ಮರೆಮಾಚಲು ದೆಹಲಿ ಪೊಲೀಸರು ಟ್ವಿಟರ್ ಕಚೇರಿ ಮೇಲೆ ಹೇಡಿತನದ ದಾಳಿ ನಡೆಸುವ ಮೂಲಕ ಬಿಜೆಪಿಯ ವ್ಯರ್ಥ ಪ್ರಯತ್ನಗಳನ್ನು ಬಹಿರಂಗಪಡಿಸಿದೆ' ಎಂದು ಹೇಳಿತ್ತು.
ಟೂಲ್ ಕಿಟ್ ಎನ್ನುವ ಹ್ಯಾಶ್ ಟ್ಯಾಗ್ ಬಳಸಿರುವ ರಾಹುಲ್, 'ಸತ್ಯಕ್ಕೆ ಯಾವುದೇ ಭಯವಿರುವುದಿಲ್ಲ' ಎಂದು ಹೇಳಿದ್ದಾರೆ.
'ಕೋವಿಡ್ ಟೂಲ್ಕಿಟ್' ಎಂಬ ಆರೋಪದ ಬಗ್ಗೆ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ಘಟಕವು ಸೋಮವಾರ ಟ್ವಿಟರ್ ಇಂಡಿಯಾಕ್ಕೆ ನೋಟಿಸ್ ಕಳುಹಿಸಿದ್ದು, 'ಟ್ವಿಟರ್ ಸಂಸ್ಥೆಯು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರ ಟ್ವೀಟ್ ತಿರುಚಿದ್ದು ಎಂದು ಯಾವ ಆಧಾರದ ಮೇಲೆ ನಿರ್ಧರಿಸಿದೆ ಎಂಬ ಮಾಹಿತಿಯನ್ನು ಹಂಚಿಕೊಳ್ಳಲು ಕೇಳಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಿಸಿಲ್ಲ ಎಂಬುದಾಗಿ ಅಪಪ್ರಚಾರ ನಡೆಸಲು ‘ಟೂಲ್ಕಿಟ್’ ಸೃಷ್ಟಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಇದನ್ನು ನಿರಾಕರಿಸಿರುವ ಕಾಂಗ್ರೆಸ್, ಬಿಜೆಪಿಯೇ ಈ ಟೂಲ್ಕಿಟ್ ಸೃಷ್ಟಿಸಿದೆ ಎಂದು ಪ್ರತ್ಯಾರೋಪ ಮಾಡಿದೆ. ಈ ವಿಚಾರವಾಗಿ ಕಾಂಗ್ರೆಸ್–ಬಿಜೆಪಿ ವಾಕ್ಸಮರದಲ್ಲಿ ತೊಡಗಿವೆ.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.