ADVERTISEMENT

2026ರ ಜನವರಿ 27: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 4:08 IST
Last Updated 27 ಜನವರಿ 2026, 4:08 IST
   

ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಮುಕ್ತ ವ್ಯಾಪಾರ: ಚರ್ಚೆ ಅಪಾರ

ಕಾರ್ಮಿಕರ ಶ್ರಮ, ಅವರ ಭಾಗೀದಾರಿಕೆ ತೀವ್ರ ಪ್ರಮಾಣದಲ್ಲಿಇರುವ ವಲಯಗಳಿಗೆ ಸೇರಿದ ಉತ್ಪನ್ನಗಳ ಮೇಲಿನ ಸುಂಕ ಇಳಿಕೆಯು ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಭಾಗವಾಗಿರುವ ನಿರೀಕ್ಷೆ ಇದೆ.

ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಒತ್ತಾಯ: ಬ್ಯಾಂಕ್‌ ನೌಕರರ ಮುಷ್ಕರ ಇಂದು

ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬ್ಯಾಂಕ್‌ ನೌಕರರು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ.

ADVERTISEMENT

Web Exclusive | ಉಡುಪಿಯ ಮಲ್ಯಾಡಿ ಪಕ್ಷಿಧಾಮ: ಕ್ಷೀಣಿಸಿದೆ ಬಾನಾಡಿ ಇಂಚರ

ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆಯ ರಾಷ್ಟ್ರೀಯ ಹೆದ್ದಾರಿಯಿಂದ ಮೂರ್ನಾಲ್ಕು ಕಿ.ಮೀ. ಸಾಗಿದರೆ ಕುರುಚಲು ಕಾಡುಗಳಿಂದಾವೃತವಾದ ಬಯಲು ಪ್ರದೇಶವೊಂದು ಕಾಣ ಸಿಗುತ್ತದೆ. ಅದುವೇ ಒಂದು ಕಾಲದಲ್ಲಿ ಈ ಭಾಗದ ಪಕ್ಷಿ ಪ್ರಿಯರ ನೆಚ್ಚಿನ ತಾಣವಾಗಿದ್ದ ಮಲ್ಯಾಡಿ ಪಕ್ಷಿಧಾಮ.

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ತೆರೆ: 8.10 ಲಕ್ಷ ಜನರ ಭೇಟಿ

ಗಣರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನ ಲಾಲ್‌ಬಾಗ್‌ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ‘ತೇಜಸ್ವಿ ವಿಸ್ಮಯ’ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆಬಿತ್ತು. 13 ದಿನ ನಡೆದ ಈ ಫಲಪುಷ್ಪ ಪ್ರದರ್ಶನಕ್ಕೆ ಒಟ್ಟು 8.10 ಲಕ್ಷ ಜನರು ಭೇಟಿ ನೀಡಿದ್ದು, ₹2.46 ಕೋಟಿ ಪ್ರವೇಶ ಶುಲ್ಕ ಸಂಗ್ರಹವಾಗಿದೆ.

ಸುಲಿಗೆ ಪ್ರಕರಣ: ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಪೋಷಕರ ಬಂಧನ

ವಿದೇಶದಲ್ಲಿ ನೆಲೆಸಿರುವ ಭಾರತ ಮೂಲದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಅವರ ಪೋಷಕರನ್ನು ಸುಲಿಗೆ ಆರೋಪದಡಿ ಪಂಜಾಬ್‌ನ ಮುಕ್ತಸರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅಗ್ನಿ ದುರಂತ: 7 ಮಂದಿ ಸಾವು, ಹಲವರು ನಾಪತ್ತೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಜಿಲ್ಲೆಯ ಗೋದಾಮುಗಳಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ ಏಳು ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

BMTC: ಡಿಸೆಂಬರ್‌ ತಿಂಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡಿದ 2,801 ಮಂದಿಗೆ ದಂಡ

ಬಿಎಂಟಿಸಿ ಬಸ್‌ಗಳಲ್ಲಿ ಡಿಸೆಂಬರ್‌ ತಿಂಗಳಲ್ಲಿ ಟಿಕೆಟ್‌ ರಹಿತವಾಗಿ ಪ್ರಯಾಣಿಸಿದ 2,801 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ.

ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್: ರಾಜಣ್ಣ 3ನೇ ಬಾರಿಗೆ ಅಧ್ಯಕ್ಷ?

ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಇದೇ 29ರಂದು ಚುನಾವಣೆ ನಡೆಯಲಿದ್ದು, ಆ ಸ್ಥಾನದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿರುವ ಶಾಸಕ ಕೆ.ಎನ್. ರಾಜಣ್ಣ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೋದರ ಸಂಬಂಧಿ, ವಿಧಾನ ಪರಿಷತ್‌ ಸದಸ್ಯ ಎಸ್. ರವಿ ಕಣ್ಣಿಟ್ಟಿದ್ದಾರೆ.

Gold And Silver Price: ಬೆಳ್ಳಿ ದರ ಕೆ.ಜಿಗೆ ₹3.64 ಲಕ್ಷ

ಬೆಂಗಳೂರಿನ ರಿಟೇಲ್ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಏರಿಕೆ ಆಗಿದೆ. 24 ಕ್ಯಾರಟ್‌ ಪರಿಶುದ್ಧ ಚಿನ್ನದ ಬೆಲೆ 10 ಗ್ರಾಂಗೆ ₹1,67,590 ಆಗಿದೆ. ಬೆಳ್ಳಿ ದರವು ಕೆ.ಜಿಗೆ ₹3,64,105ಕ್ಕೆ ತಲುಪಿದೆ. ಶನಿವಾರದ ವಹಿವಾಟಿಗೆ ಹೋಲಿಸಿದರೆ ಚಿನ್ನದ ದರದಲ್ಲಿ ₹2,590 ಮತ್ತು ಬೆಳ್ಳಿ ದರದಲ್ಲಿ ₹9,805 ಏರಿಕೆಯಾಗಿದೆ.

WPL: ಆರ್‌ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ 15 ರನ್‌ಗಳ ಜಯ

ಇಂಗ್ಲೆಂಡ್‌ ಆಟಗಾರ್ತಿ ನ್ಯಾಟ್ ಶಿವರ್ ಬ್ರಂಟ್ ಅವರು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ಮೊದಲ ಶತಕ ಗಳಿಸಿದ ಆಟಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್‌ ತಂಡವು ಸೋಮವಾರ ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು 15 ರನ್‌ಗಳಿಂದ ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.