ADVERTISEMENT

ಮುನ್ನಾರ್ | ಕಾರನ್ನು ಮಗುಚಿ ಹಾಕಿದ ಕಾಡಾನೆ: ಪವಾಡ ಸದೃಶವಾಗಿ ಪ್ರವಾಸಿಗರು ಪಾರು

ಪಿಟಿಐ
Published 15 ಫೆಬ್ರುವರಿ 2025, 10:47 IST
Last Updated 15 ಫೆಬ್ರುವರಿ 2025, 10:47 IST
<div class="paragraphs"><p>ಆನೆ</p></div>

ಆನೆ

   

ಇಡುಕ್ಕಿ (ಕೇರಳ): ಕೇರಳದ ಮುನ್ನಾರ್‌ನಲ್ಲಿ ಶನಿವಾರ ಪ್ರವಾಸಿಗರ ಕಾರಿನ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು, ಪ‍ವಾಡ ಸದೃಶವಾಗಿ ಪಾರಾಗಿದ್ದಾರೆ.

ಮುನ್ನಾರ್–ದೇವಿಕುಳಂ ರಸ್ತೆಯ ಸಿಗ್ನಲ್ ಪಾಯಿಂಟ್‌ನಲ್ಲಿ ಘಟನೆ ಜರುಗಿದ್ದಾಗಿ ಅರಣ್ಯ ಇಲಾಖೆಯ ಮೂಲಗಳಿಂದ ಗೊತ್ತಾಗಿದೆ.

ADVERTISEMENT

ಆನೆಯು ಚಲಿಸುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿ, ಮಗುಚಿ ಹಾಕಿದೆ ಎಂದು ನಿವಾಸಿಗಳನ್ನು ಉಲ್ಲೇಖಿಸಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಸುದೈವಶಾತ್ ಚಾಲಕ ಸೇರಿ ನಾಲ್ವರು ಪ್ರವಾಸಿಗರು ಯಾವುದೇ ಗಾಯಗಳಿಲ್ಲದೆ ಪವಾಡಸದೃಶರಾಗಿ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆನೆಯನ್ನು ವನ್ಯಜೀವಿ ವಿಭಾಗದ ರಾಪಿಡ್ ರೆಸ್ಪಾನ್ಸ್ ಟೀಮ್ ಕಾಡಿಗೆ ಅಟ್ಟಿದೆ.

‘ನಾನು ಕಾರನ್ನು ಹಿಂದೆ ತಿರುಗಿಸಲು ಪ್ರಯತ್ನಿಸಿದೆ, ಆದರೆ ಕೂಡಲೇ ಓಡಿ ಬಂದ ಆನೆ ಕಾರಿನ ಮೇಲೆ ದಾಳಿ ಮಾಡಿತು’ ಎಂದು ಚಾಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಆನೆ ದಾಳಿಯಿಂದ ಭಯಭೀತರಾದ ಪ್ರವಾಸಿಗರು, ಹಾನಿಗೀಡಾದ ಕಾರಿನ ಬಳಿ ನಡುಗುತ್ತಾ ನಿಂತಿರುವ ದೃಶ್ಯಗನ್ನು ಟಿ.ವಿ ವಾಹಿನಿಗಳು ಪ್ರಸಾರ ಮಾಡಿವೆ. ಆನೆ ದಾಳಿಯಿಂದಾಗಿ ಒಂದು ಬದಿಯ ಡೋರ್‌ಗಳು ಹಾಗೂ ಮಿರರ್‌ಗಳು ಹಾನಿಗೀಡಾಗಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.

ಪ್ರವಾಸಿಗರು ಮುನ್ನಾರ್‌ನಿಂದ ತೇಕ್ಕಡಿಗೆ ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿದೇಶಿ ಪ್ರವಾಸಿಗರು ಎನ್ನುವ ಮಾಹಿತಿ ಇದ್ದು, ಅದು ಖಚಿತವಾಗಿಲ್ಲ. ವಾಹನ ಹಾನಿಗೀಡಾಗಿದ್ದರೂ, ಅದೃಷ್ಠವಶಾತ್ ಪ್ರವಾಸಿಗರಿಗೆ ಗಾಯಗಳಾಗಿಲ್ಲ. ಆನೆಯನ್ನು ಕಾಡಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.