ADVERTISEMENT

ಮುಂಗಾರು ಅಧಿವೇಶನ | ಸಂಸತ್ ಕಲಾಪಕ್ಕೆ ಪ್ರತಿಭಟನೆ ಬಿಸಿ; 32 ಮಸೂದೆಗಳು ಬಾಕಿ

ಐಎಎನ್ಎಸ್
Published 31 ಜುಲೈ 2022, 11:16 IST
Last Updated 31 ಜುಲೈ 2022, 11:16 IST
   

ನವದೆಹಲಿ:ಕೇಂದ್ರ ಸರ್ಕಾರವುಈ ಬಾರಿಯಮುಂಗಾರು ಅಧಿವೇಶನದಲ್ಲಿ ಅಂಗೀಕಾರ ಪಡೆಯಲು 32 ಮಸೂದೆಗಳನ್ನು ಪಟ್ಟಿ ಮಾಡಿತ್ತು. ಆದರೆ, ಸಂಸತ್ತಿನಲ್ಲಿ ಜಿಎಸ್‌ಟಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಹಣದುಬ್ಬರದ ವಿಚಾರವಾಗಿವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು, ಎರಡು ವಾರಗಳಿಂದ ಕಲಾಪಕ್ಕೆ ಅಡ್ಡಿಯಾಗಿದೆ. ಹೀಗಾಗಿಮಸೂದೆಗಳಿಗೆ ಅಂಗೀಕಾರ ಸಿಗುವುದುಅನುಮಾನವಾಗಿದೆ.

ಮುಂಗಾರು ಅಧಿವೇಶನದ ಸಂದರ್ಭ ಉಭಯ ಸದನಗಳಲ್ಲಿ ನಿತ್ಯ 6 ಗಂಟೆ ಕಲಾಪಕ್ಕೆ ಸಮಯ ನಿಗದಿಯಾಗಿದೆ. ಆದಾಗ್ಯೂ, ಇದುವರೆಗೆ ಲೋಕಸಭೆಯಲ್ಲಿ ಹೆಚ್ಚೂಕಡಿಮೆ 16 ಗಂಟೆ ಹಾಗೂ ರಾಜ್ಯಸಭೆಯಲ್ಲಿ 11 ಗಂಟೆ ಕಲಾಪವಷ್ಟೇ ನಡೆದಿದೆ. ನಿರಂತರ ಪ್ರತಿಭಟನೆಯಿಂದಾಗಿ ಲೋಕಸಭೆಯ 4 ಹಾಗೂರಾಜ್ಯಸಭೆಯ 23 ಸದಸ್ಯರನ್ನು ಅಮಾನತು ಮಾಡಲಾಗಿದೆ.

ಲೋಕಸಭೆಯ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಸಂಬೋಧಿಸಿದ್ದನ್ನು ಖಂಡಿಸಿ, ಆಡಳಿತ ಪಕ್ಷ ಬಿಜೆಪಿ ಸದಸ್ಯರು ಸಹ ಕಳೆದ ಎರಡು ದಿನಗಳಿಂದ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.

ADVERTISEMENT

ಸರ್ಕಾರ, ಗದ್ದಲದ ನಡುವೆಯೂ 'ಉದ್ದೀಪನ ಮದ್ದು ತಡೆ ಮಸೂದೆ' ಹಾಗೂ 'ಕೌಟುಂಬಿಕ ನ್ಯಾಯಾಲಯ ಮಸೂದೆ'ಗಳಿಗೆ ಲೋಕಸಭೆಯಲ್ಲಿ ಅನುಮೋದನೆ ಪಡೆದಿದೆ.

ಸದ್ಯ,ಬೆಲೆ ಏರಿಕೆ ವಿಚಾರವಾಗಿ ಚರ್ಚಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ, ಪ್ರತಿಪಕ್ಷಗಳು ಪಟ್ಟುಬಿಡುವ ಮನಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಸದನಗಳು ಸುಗಮವಾಗಿ ಸಾಗುವುದು ಅನುಮಾನ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕಾಂಗ್ರೆಸ್‌ ಪಕ್ಷವು ಬೆಲೆ ಏರಿಕೆಯನ್ನು ವಿರೋಧಿಸಿ ಆಗಸ್ಟ್‌ 5ರಂದು ರಾಷ್ಟ್ರದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

ಸಚಿವ ಪಿಯೂಷ್ ಗೋಯಲ್, 'ನಾವು ಚರ್ಚೆಗೆ ಸಿದ್ಧರಿದ್ದೇವೆ. ಆದರೆ, ವಿರೋಧ ಪಕ್ಷಗಳ ಸದಸ್ಯರು ನಿರಂತರವಾಗಿ ಸದನಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಹಣಕಾಸು ಸಚಿವರು ಚೇತರಿಸಿಕೊಂಡು ಸಂಸತ್‌ಗೆ ಮರಳಿದ ಬಳಿಕ ಬೆಲೆ ಏರಿಕೆ ಕುರಿತ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡುತ್ತೇವೆ' ಎಂದಿದ್ದಾರೆ. ಆದಾಗ್ಯೂ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಪ್ರತಿಪಕ್ಷಗಳು, ಸರ್ಕಾರವು ಚರ್ಚೆಗೆ ಸಿದ್ಧವಿಲ್ಲ. ಅಷ್ಟಲ್ಲದೆ, ಪ್ರತಿಪಕ್ಷಗಳನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿವೆ.

ಸದ್ಯ ಪ್ರತಿಪಕ್ಷಗಳ 27 ಸಂಸದರನ್ನು ಅಮಾನತುಗೊಳಿಸಲಾಗಿದೆ. ಸರ್ಕಾರಅಮಾನತು ನಿರ್ಧಾರದಿಂದ ಹಿಂದೆ ಸರಿಯುವ ಲಕ್ಷಣಗಳೂ ಗೋಚರಿಸುತ್ತಿಲ್ಲ.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್‌ ರಮೇಶ್‌, 'ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸಂಸದರನ್ನು ಅಮಾನತುಗೊಳಿಸುವ ಮೂಲಕ, ದೇಶದ ಜನರ ನೈಜ ಹಾಗೂ ತುರ್ತು ಸಮಸ್ಯೆಗಳ ಬಗ್ಗೆವಿರೋಧ ಪಕ್ಷಗಳು ಸಂಸತ್ತಿನಲ್ಲಿ ಧ್ವನಿ ಎತ್ತುವುದಕ್ಕೆ ಅವಕಾಶ ನೀಡುವ ಮನಸ್ಸುಮೋದಿ ಸರ್ಕಾರಕ್ಕೆ ಇಲ್ಲ ಎಂಬುದು ಸ್ಪಷ್ಟವಾಗಿದೆ' ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.