ಸಂಸತ್ ಭವನ
ನವದೆಹಲಿ: ಮೂಲಸೌಕರ್ಯ, ನಗರಾಭಿವೃದ್ಧಿ ಮತ್ತು ನವೋದ್ಯಮ ಕ್ಷೇತ್ರಗಳಲ್ಲಿ ₹1.6 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸೌತ್ ಬ್ಲಾಕ್ನಲ್ಲಿ ನಡೆದ ಕೊನೆಯ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ನಗರಗಳ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಉತ್ತೇಜನ ನೀಡಲು ಕೇಂದ್ರದ ₹1 ಲಕ್ಷ ಕೊಟಿ ನೆರವಿನಿಂದ ‘ನಗರ ಸವಾಲು ನಿಧಿ (ಯುಸಿಎಫ್)‘ ಆರಂಭಿಸಲು ಸಂಪುಟ ಅನುಮೋದನೆ ನೀಡಿದೆ. ನವೋದ್ಯಮಕ್ಕೆ ಉತ್ತೇಜನ ನೀಡಲು ‘ಸ್ಟಾರ್ಟ್ ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ 2.0‘ ಕ್ಕೆ ಒಪ್ಪಿಗೆ ಕೊಡಲಾಗಿದೆ. ಡೀಪ್ ಟೆಕ್, ತಂತ್ರಜ್ಞಾನ ಆಧಾರಿತ ನವೀನ ಉತ್ಪಾದನಾ ಸ್ಟಾರ್ಟ್ ಅಪ್ಗಳು ಮತ್ತು ಆರಂಭಿಕ ಬೆಳವಣಿಗೆಯ ಹಂತದ ಸ್ಟಾರ್ಟ್ಅಪ್ಗಳನ್ನು ಬೆಂಬಲಿಸಲು ₹10,000 ಕೋಟಿ ನಿಧಿ ಬಳಕೆ ಮಾಡಲಾಗುತ್ತದೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ‘ನಗರ ಸವಾಲು ನಿಧಿ ಯೋಜನೆಯಡಿ ಕೇಂದ್ರ ಸರ್ಕಾರವು ಯೋಜನಾ ವೆಚ್ಚದ ಶೇ 25 ಭರಿಸಲಿದೆ. ಈ ನಿಧಿಗೆ ಮಾರುಕಟ್ಟೆಯಿಂದ ಯೋಜನಾ ವೆಚ್ಚದ ಕನಿಷ್ಠ ಶೇಕಡಾ 50 ರಷ್ಟನ್ನು ಸಂಗ್ರಹಿಸುವುದು ಕಡ್ಡಾಯ. ಈ ಉಪಕ್ರಮವು ಮುಂದಿನ ಐದು ವರ್ಷಗಳಲ್ಲಿ ನಗರ ವಲಯದಲ್ಲಿ ಒಟ್ಟು ₹4 ಲಕ್ಷ ಕೋಟಿ ಹೂಡಿಕೆಗೆ ಕಾರಣವಾಗುತ್ತದೆ‘ ಎಂದರು.
ಈ ನಿಧಿಯು ದೇಶದ ನಗರ ಅಭಿವೃದ್ಧಿ ವಿಧಾನವನ್ನು ಅನುದಾನ ಆಧಾರಿತ ಹಣಕಾಸು ವ್ಯವಸ್ಥೆಯಿಂದ ಮಾರುಕಟ್ಟೆ ಸಂಯೋಜಿತ, ಸುಧಾರಣಾ ಪ್ರೇರಿತ ಮತ್ತು ಫಲಿತಾಂಶ ಆಧಾರಿತ ಮೂಲಸೌಕರ್ಯ ಸೃಷ್ಟಿಯತ್ತ ಕೊಂಡೊಯ್ಯಲಿದೆ. ಈ ನಿಧಿಯು 2025-26 ರಿಂದ 2030-31ರ ಆರ್ಥಿಕ ವರ್ಷದವರೆಗೆ ಕಾರ್ಯನಿರ್ವಹಿಸಲಿದ್ದು, ಇದರ ಅನುಷ್ಠಾನದ ಅವಧಿಯನ್ನು 2033-34ರ ಆರ್ಥಿಕ ವರ್ಷದವರೆಗೆ ವಿಸ್ತರಿಸಬಹುದು ಅವರು ಹೇಳಿದರು.
10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಎಲ್ಲ ನಗರಗಳು
ಮೇಲೆ ಉಲ್ಲೇಖಿಸದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು
1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪ್ರಮುಖ ಕೈಗಾರಿಕಾ ನಗರಗಳು.
ಹೆಚ್ಚುವರಿಯಾಗಿ, ಗುಡ್ಡಗಾಡು ರಾಜ್ಯಗಳು, ಈಶಾನ್ಯ ರಾಜ್ಯಗಳ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಮತ್ತು 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ನಗರ ಸ್ಥಳೀಯ ಸಂಸ್ಥೆಗಳು 'ಕ್ರೆಡಿಟ್ ಮರುಪಾವತಿ ಖಾತರಿ ಯೋಜನೆ'ಯ ಅಡಿಯಲ್ಲಿ ಬೆಂಬಲ ಪಡೆಯಲು ಅರ್ಹವಾಗಿರುತ್ತವೆ. ಒಟ್ಟಾರೆಯಾಗಿ, ಎಲ್ಲ ನಗರಗಳನ್ನು ಈ ನಿಧಿಯಡಿ ಅಡಿಯಲ್ಲಿ ಸೇರಿಸಲಾಗುವುದು.
ಯೋಜನಾ ವೆಚ್ಚದ ಶೇ 50 ಮೊತ್ತವನ್ನು ಮುನ್ಸಿಪಲ್ ಬಾಂಡ್ ಗಳು, ಬ್ಯಾಂಕ್ ಸಾಲಗಳು ಮತ್ತು ಖಾಸಗಿ ಸಹಭಾಗಿತ್ವದ ಮೂಲಕ ಮಾರುಕಟ್ಟೆ ಮೂಲಗಳಿಂದ ಸಂಗ್ರಹಿಸಬೇಕಾಗುತ್ತದೆ. ಶೇ 25 ಭಾಗವನ್ನು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ನಗರ ಸ್ಥಳೀಯ ಸಂಸ್ಥೆಗಳು ಅಥವಾ ಇತರ ಮೂಲಗಳಿಂದ ಭರಿಸಬಹುದು.
ಪಾರದರ್ಶಕ ಮತ್ತು ಸ್ಪರ್ಧಾತ್ಮಕ ‘ಚಾಲೆಂಜ್ ಮೋಡ್‘ ಮೂಲಕ ಯೋಜನೆಗಳನ್ನು ಆಯ್ಕೆ ಮಾಡಲಾಗುತ್ತದೆ.
ನಗರ ಆಡಳಿತ, ಮಾರುಕಟ್ಟೆ ಮತ್ತು ಹಣಕಾಸು ವ್ಯವಸ್ಥೆಗಳು, ಕಾರ್ಯಾಚರಣೆಯ ದಕ್ಷತೆ ಮತ್ತು ನಗರ ಯೋಜನೆ ವಲಯಗಳಲ್ಲಿನ ಸುಧಾರಣೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು.
ಎರಡನೇ ಹಾಗೂ ಮೂರನೇ ಹಂತದ ನಗರಗಳು ಮೊದಲ ಬಾರಿಗೆ ಮಾರುಕಟ್ಟೆ ಸಾಲ ಪಡೆಯಲು ಅನುಕೂಲವಾಗುವಂತೆ ₹5,000 ಕೋಟಿಗಳ ‘ಸಾಲ ಮರುಪಾವತಿ ಖಾತರಿ ಯೋಜನೆ‘ಗೆ ಅನುಮೋದನೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.