
ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಜೊತೆ ವಕೀಲೆ ಯೋಗಿತಾ ಭಯಾನ ದೆಹಲಿಯ ಇಂಡಿಯಾಗೇಟ್ ಬಳಿ ಪ್ರತಿಭಟನೆ ನಡೆಸಿದರು
–ಪಿಟಿಐ ಚಿತ್ರ
ಉನ್ನಾವೊ (ಉತ್ತರ ಪ್ರದೇಶ): ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗರ್ ಅನುಭವಿಸುತ್ತಿದ್ದ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಅಮಾನತುಗೊಳಿಸಿರುವುದು ‘ನ್ಯಾಯ ಸಮ್ಮತವಲ್ಲ’ ಎಂದು ಹೇಳಿರುವ ಪ್ರಕರಣದ ಸಂತ್ರಸ್ತೆ, ತನಗೆ ಮತ್ತು ತಮ್ಮ ಕುಟುಂಬಕ್ಕೆ ಸೆಂಗರ್ ಆಪ್ತರು ಬೆದರಿಕೆವೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ದೆಹಲಿ ಇಂಡಿಯಾ ಗೇಟ್ ಬಳಿ ತನ್ನ ತಾಯಿ ಮತ್ತು ವಕೀಲೆ ಯೋಗಿತಾ ಭಯನಾ ಅವರ ಜೊತೆ ಪ್ರತಿಭಟನೆ ನಡೆಸಿದ ಸಂತ್ರಸ್ತೆ, ‘ತೀರ್ಪಿನ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಆದರೆ ಕುಟುಂಬದ ಭಾವನೆಗಳಿಗೆ ಬೆಲೆ ಕೊಟ್ಟು ನಿರ್ಧಾರವನ್ನು ಬದಲಾಯಿಸಿದೆ’ ಎಂದು ಹೇಳಿದ್ದಾರೆ.
ದೆಹಲಿ ಹೈಕೊರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಪ್ರಕರಣದ ಸಂತ್ರಸ್ತೆ ನಿರ್ಧರಿಸಿದ್ದಾರೆ.
‘ಸೆಂಗರ್ ಶಿಕ್ಷೆ ಅಮಾನತುಗೊಳಿಸುವ ಮೂಲಕ ತನ್ನ ಕುಟುಂಬಕ್ಕೆ ಸಾವಿಗಿಂತ ಕಡಿಮೆ ಇಲ್ಲದ ಶಿಕ್ಷೆಯನ್ನು ನೀಡಲಾಗಿದೆ. ಅಂಥ ವ್ಯಕ್ತಿಗಳು ಹೊರಬಂದರೆ ನಾವು ಹೇಗೆ ಸುರಕ್ಷಿತರಾಗಿರುವುದು ಮತ್ತು ನಾವು ಈಗ ಸುರಕ್ಷಿತರಾಗಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
‘ನಮ್ಮನ್ನು ಜೈಲಿಗೆ ಕಳುಹಿಸಿ ನಾವು ಅಲ್ಲಿ ಸುರಕ್ಷಿತರಾಗಿರುತ್ತೇವೆ. ಅಪರಾಧಿಯ ಆಪ್ತರು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ನಮಗೆ ಒಬ್ಬ ಸೋದರನಿದ್ದಾನೆ. ಅವರು ಅವನಿಗೆ ಏನು ಮಾಡುತ್ತಾರೋ ಎಂಬ ಭಯವಿದೆ’ ಎಂದು ಸಂತ್ರಸ್ತೆಯ ಸಹೋದರಿ ಆತಂಕ ವ್ಯಕ್ತಪಡಿಸಿದ್ದಾರೆ.
2012ರಲ್ಲಿ ದೆಹಲಿಯಲ್ಲಿ ಅತ್ಯಾಚಾರಗೊಂಡು ಮೃತಪಟ್ಟಿದ್ದ ನಿರ್ಭಯ ಅವರ ತಾಯಿ ಆಶಾದೇವಿ ಅವರು ಸೆಂಗರ್ ಶಿಕ್ಷೆ ಅಮಾನತುಗೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
2019ರಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸೆಂಗರ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಇತ್ಯರ್ಥವಾಗುವರೆಗೆ ಅಮಾನತಿನಲ್ಲಿರಿಸಿ ದೆಹಲಿ ಹೈಕೋರ್ಟ್ ಮಂಗಳವಾರ ಆದೇಶಿಸಿದೆ. ಸೆಂಗರ್ಗೆ ಷರತ್ತುಬದ್ಧ ಜಾಮೀನು ನೀಡಿದೆ.
ಅತ್ಯಾಚಾರ ಪ್ರಕರಣದ ಶಿಕ್ಷೆ ಅಮಾನತುಗೊಂಡಿದ್ದರೂ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವು ಪ್ರಕರಣದಲ್ಲಿ ವಿಧಿಸಲಾಗಿದ್ದ 10 ವರ್ಷ ಜೈಲು ಶಿಕ್ಷೆಯನ್ನು ಸೆಂಗರ್ ಅನುಭವಿಸಬೇಕಾಗುತ್ತದೆ. 2017ರಲ್ಲಿ ಸೆಂಗರ್ ಸಂತ್ರಸ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ.
ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಸಲುವಾಗಿ ವಕೀಲರನ್ನು ಭೇಟಿ ಮಾಡಲು ಹೋಗುತ್ತಿದ್ದ ನಮ್ಮನ್ನು ಸಿಆರ್ಪಿಎಫ್ ಸಿಬ್ಬಂದಿ ತಡೆದಿದ್ದರು. ನಮ್ಮನ್ನು ಹಿಂದೆ ಕಳುಹಿಸಲು ಪ್ರಯತ್ನಿಸಿದರು. ನಾನು ತುಂಬಾ ಕಿರುಚಾಡಿದ ಬಳಿಕ ಅವಕಾಶ ನೀಡಿದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ ‘ಇಂಡಿಯಾಗೇಟ್ ಬಳಿ ಪ್ರತಿಭಟನೆ ಮಾಡುತ್ತಿದ್ದ ನನ್ನ ತಾಯಿಯನ್ನು ರಸ್ತೆಯಲ್ಲಿ ಎಸೆದು ಹೋಗಿದ್ದಾರೆ’ ಎಂದು ತಿಳಿಸಿದ್ದಾರೆ. ‘ಘಟನೆಯಲ್ಲಿ ಸಂತ್ರಸ್ತೆಗೂ ಗಾಯಗಳಾಗಿವೆ’ ಎಂದು ವಕೀಲರಾದ ಭಯನಾ ಆರೋಪಿಸಿದ್ದಾರೆ. ಈ ಕುರಿತ ವಿಡಿಯೊವನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಪ್ರತಿಭಟನಕಾರರನ್ನು ಮಂಗಳವಾರ ರಾತ್ರಿ ಇಂಡಿಯಾಗೇಟ್ ಬಳಿಯಿಂದ ಕರೆದುಕೊಂಡು ಹೋಗಿ ಸಿಆರ್ಪಿಎಫ್ನ ಬಸ್ನಲ್ಲಿ ಕೂರಿಸಿದ್ದೇವೆ. ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಸಂತ್ರಸ್ತೆಯ ತಾಯಿ ಬಸ್ನಿಂದ ಜಿಗಿಯಲು ಯತ್ನಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ನವದೆಹಲಿ: ದೆಹಲಿ ಹೈಕೋರ್ಟ್ ತೀರ್ಪು ವಿರುದ್ಧ ಪತಿಭಟಿಸಿದ ಸಂತ್ರಸ್ತೆಯನ್ನು ನಡೆಸಿಕೊಂಡ ರೀತಿ ಸೂಕ್ತವಾದದ್ದೇ ಎಂದು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಪ್ರಶ್ನಿಸಿದ್ದಾರೆ. ‘ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯೇ? ನ್ಯಾಯದ ಪರವಾಗಿ ಧ್ವನಿ ಎತ್ತಿದ್ದು ಅವಳು ಮಾಡಿದ ತಪ್ಪೇ? ಸೆಂಗರ್ ಶಿಕ್ಷೆ ಅಮಾನತು ಮಾಡಿರುವುದು ನಿರಾಶದಾಯಕ ಮತ್ತು ನಾಚಿಗೇಡಿನ ಸಂಗತಿ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.