ಯೋಗಿ ಆದಿತ್ಯನಾಥ್
ಪಿಟಿಐ ಚಿತ್ರ
ಮಹಾಕುಂಭ ನಗರ: ಯುವಜನತೆಗೆ ಉಚಿತವಾಗಿ ನೀಡಲು 25 ಲಕ್ಷ ಸ್ಮಾರ್ಟ್ಫೋನ್ ಖರೀದಿ ಟೆಂಡರ್ಗೆ ಅನುಮೋದನೆ ನೀಡಲು ಉತ್ತರ ಪ್ರದೇಶ ಸರ್ಕಾರದ ಸಂಪುಟ ಸಭೆಯಲ್ಲಿ ಬುಧವಾರ ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಧ್ಯಕ್ಷತೆಯಲ್ಲಿ ಪ್ರಯಾಗರಾಜ್ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಇದರೊಂದಿಗೆ ಹಾಥರಸ್, ಕಾಸಗಂಜ್ ಮತ್ತು ಬಾಗಪತ್ ಜಿಲ್ಲೆಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಪಾಲುದಾರಿಕೆಯ ವೈದ್ಯಕೀಯ ಕಾಲೇಜು ಮಂಜೂರಿಗೂ ಸಂಪುಟ ಅಸ್ತು ಎಂದಿತು ಎಂದು ಅಧಿಕಾರಿಗಳು ಹೇಳಿದ್ಧಾರೆ.
‘ಸ್ವಾಮಿ ವಿವೇಕಾನಂದ ಯುವ ಸಶಕ್ತೀಕರಣ ಯೋಜನೆಯಡಿ 25 ಲಕ್ಷ ಯುವಜನತೆಗೆ ಉಚಿತವಾಗಿ ಹಂಚಲು ಉತ್ತರ ಪ್ರದೇಶ ಸರ್ಕಾರ 25 ಲಕ್ಷ ಸ್ಮಾರ್ಟ್ ಫೋನ್ ಖರೀದಿಸುತ್ತಿದೆ. ಈ ಯೋಜನೆ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಜನತೆ ಸಬಲೀಕರಣಗೊಳಿಸುವ ಗುರಿ ಹೊಂದಲಾಗಿದ್ದು, ಮುಂದಿನ ಐದು ವರ್ಷಗಳವರೆಗೆ ಈ ಯೋಜನೆ ಜಾರಿಯಲ್ಲಿರಲಿದೆ’ ಎಂದಿದ್ದಾರೆ.
‘ಈ ಯೋಜನೆಗಾಗಿ 2024–25ರಲ್ಲಿ ₹4 ಸಾವಿರ ಕೋಟಿ ಅನುದಾನವನ್ನು ಉತ್ತರ ಪ್ರದೇಶ ಸರ್ಕಾರ ಮೀಸಲಿಟ್ಟಿದೆ. ತಾಂತ್ರಿಕ, ಆರೋಗ್ಯ, ಕೌಶಲಾಭಿವೃದ್ಧಿ ಹಾಗೂ ಐಟಿಐ ಸೇರಿದಂತೆ ವೃತ್ತಿಪರ ಮತ್ತು ಉನ್ನತ ಶಿಕ್ಷಣಕ್ಕೆ ಸೇರುವ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಆಧಾರಿತ ಕೌಶಲ ಹೆಚ್ಚಳಕ್ಕೆ ಹಾಗೂ ಭವಿಷ್ಯಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ’ ಎಂದು ಸರ್ಕಾರ ಹೇಳಿದೆ.
‘ರಾಜ್ಯದಲ್ಲಿರುವ 62 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಟಾಟಾ ಟೆಕ್ನಾಲಜೀಸ್ ಕಂಪನಿ ಸಹಯೋಗದಲ್ಲಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿದೆ. ಈ ಯೋಜನೆಯು ₹3,634 ಕೋಟಿ ವೆಚ್ಚದ್ದಾಗಿದೆ. ಈ ಯೋಜನೆಗಾಗಿ ಸರ್ಕಾರವು ಕಂಪನಿಯೊಂದಿಗೆ 11 ವರ್ಷಗಳ ಒಪ್ಪಂದ ಮಾಡಿಕೊಳ್ಳಲಿದೆ. ಇದರಿಂದ ವಾರ್ಷಿಕ 12,500 ಅಭ್ಯರ್ಥಿಗಳನ್ನು ತರಬೇತುಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂಉದ ಸರ್ಕಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.