ಲಖನೌ: ಉತ್ತರ ಪ್ರದೇಶದಿಂದಅಕ್ಕ–ಪಕ್ಕದ ರಾಜ್ಯಗಳಿಗೆ ವಲಸೆ ಹೋಗಿರುವ ಕಾರ್ಮಿಕರು ಊರು ಸೇರಲಾರದೆ ಗಡಿ ಭಾಗಗಳಲ್ಲಿ ಸಿಲುಕಿದ್ದು, ಅವರು ರಾಜ್ಯಕ್ಕೆ ಮರಳಲು ಅನುವಾಗುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ 1,000 ಬಸ್ಗಳನ್ನು ಕಳುಹಿಸಿಕೊಡುತ್ತಿರುವುದಾಗಿ ಸರ್ಕಾರದವಕ್ತಾರರು ಶನಿವಾರ ತಿಳಿಸಿದ್ದಾರೆ.
ನೋಯಿಡಾ, ಘಾಜಿಯಾಬಾದ್, ಬುಲಂದ್ಷಹರ್, ಅಲಿಗಢ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅತಂತ್ರರಾಗಿರುವ ಕಾರ್ಮಿಕರನ್ನು ರಾಜ್ಯಕ್ಕೆ ಕರೆ ತರಲು ಸಾರಿಗೆ ಇಲಾಖೆಯ ಅಧಿಕಾರಿಗಳು, ಬಸ್ ಚಾಲಕರು ಹಾಗೂ ನಿರ್ವಾಹಕರನ್ನು ಶುಕ್ರವಾರ ರಾತ್ರಿ ಸಂಪರ್ಕಿಸಲಾಗಿದೆ. ಜನರಿಗೆ ಸಹಾಯ ಮಾಡಲು ಸೇವೆಯ ಅವಶ್ಯಕತೆ ಇರುವುದನ್ನು ತಿಳಿಸಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರು ಶುಕ್ರವಾರ ತಡ ರಾತ್ರಿ ವರೆಗೂ ಬಸ್ಗಳ ವ್ಯವಸ್ಥೆ ಮಾಡುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡುವುದರಲ್ಲಿ ತೊಡಗಿದ್ದರು ಹಾಗೂ ಕಾರ್ಮಿಕರು, ಅವರ ಕುಟುಂಬಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.
ಲಖನೌ ಬಸ್ ನಿಲ್ದಾಣಕ್ಕೆ ಬಂದಿಳಿಯುವ ಜನರಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಆಗಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಗಮನಿಸಿದ್ದಾರೆ. ಕಾನ್ಪುರ, ವಾರಾಣಸಿ, ಗೋರಖ್ಪುರ್, ಫೈಜಾಬಾದ್, ಪ್ರತಾಪಗಢ, ಸುಲ್ತಾನ್ಪುರ್, ಅಮೇಠಿ, ರಾಯ್ ಬರೇಲಿ, ಗೋಂಡಾ, ಶ್ರಾವಸ್ತಿ ಸೇರಿದಂತೆ ಹಲವು ಭಾಗಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಡಿಜಿಪಿ ಹಿತೇಶ್ ಚಂದ್ರ ಅವಾಸ್ಥಿ ಹಾಗೂ ಲಖನೌ ಪೊಲೀಸ್ ಕಮಿಷನರ್ ಸುಜಿತ್ ಕುಮಾರ್ ಪಾಂಡೆ ಬಸ್ ನಿಲ್ದಾಣಕ್ಕೆ ಬಂದು ವ್ಯವಸ್ಥೆಯ ನಿರ್ವಹಣೆ ನಡೆಸಿದ್ದಾರೆ. ಕೊರೊನಾ ವೈರಸ್ ಸೋಂಕು ತಡೆಗಾಗಿ ದೇಶದಾದ್ಯಂತ 21 ದಿನಗಳ ಲಾಕ್ಡೌನ್ ಘೋಷಣೆಯಾಗಿದ್ದು, ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳಲು ಸಾಧ್ಯವಾಗದೆ ಹಲವು ರಾಜ್ಯಗಳ ನಗರಗಳಲ್ಲಿಉಳಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.