–ರಾಯಿಟರ್ಸ್ ಚಿತ್ರ
ಲಖನೌ: ಉತ್ತರ ಪ್ರದೇಶದ ಸಚಿವ ಅಸಿಂ ಅರುಣ್ ಅವರು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ವ್ಯಕ್ತಿತ್ವ, ಹೃದಯವಂತಿಕೆ, ಸರಳತೆಯನ್ನು ಗುಣಗಾನ ಮಾಡಿದ್ದಾರೆ.
ಸಿಂಗ್ ಅವರ ಸಾವಿನ ಬೆನ್ನಲ್ಲೇ ಸಣ್ಣ ಟಿಪ್ಪಣಿಯ ಮೂಲಕ ಹಳೇಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಸದ್ಯ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿರುವ ಅಸಿಂ ಅವರು ಈ ಹಿಂದೆ ಸಿಂಗ್ ಅವರಿಗೆ ಭದ್ರತೆ ನೀಡುವ ತಂಡದ ಸದಸ್ಯರಾಗಿದ್ದರು.
ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಭದ್ರತೆ ಒದಗಿಸುತ್ತಿದ್ದ ವಿಶೇಷ ಭದ್ರತಾ ಪಡೆ (ಎಸ್ಪಿಜಿ)ಯ ಕ್ಲೋಸ್ ಪ್ರೊಟೆಕ್ಷನ್ ಟೀಂ (ಸಿಪಿಟಿ)ನಲ್ಲಿ ಅಸಿಂ ಕಾರ್ಯನಿರ್ವಹಿಸುತ್ತಿದ್ದರು. ಸಿಂಗ್ ಅವರ ವಿಭಿನ್ನ ವ್ಯಕ್ತಿತ್ವದ ಬಗ್ಗೆ ಅವರು ಟಿಪ್ಪಣಿಯಲ್ಲಿ ಬೆಳಕು ಚೆಲ್ಲಿದ್ದಾರೆ.
ಪ್ರಧಾನಿಯಾಗಿದ್ದರೂ ಕೂಡ ಐಷಾರಾಮಿ ಬಿಎಂಡಬ್ಲ್ಯು ಕಾರಿಗಿಂತ ಮಾರುತಿ ಸುಜುಕಿ 800 ಕಾರನ್ನೇ ಅವರು ಬಳಸುತ್ತಿದ್ದರು. ಇದು ಅವರ ಸರಳತೆ, ಮಧ್ಯಮ ವರ್ಗದ ಜೊತೆಗೆ ಅವರಿಗಿದ್ದ ಸಂಬಂಧ ಹಾಗೂ ಸಾಮಾನ್ಯ ಮನುಷ್ಯರಿಗಾಗಿ ಕೆಲಸ ಮಾಡಬೇಕು ಎನ್ನುವ ಅವರ ಬದ್ಧತೆಯ ಪ್ರತೀಕವಾಗಿತ್ತು ಎಂದಿದ್ದಾರೆ.
‘ಸಿಪಿಟಿಯ ಎಐಜಿಯಾಗಿ ಪ್ರಧಾನಿಯವರೊಂದಿಗೆ ಸದಾ ಕಾಲ ಅವರ ನೆರಳಿನಂತೆ ಇರುವುದು ನನ್ನ ಕೆಲಸವಾಗಿತ್ತು. ಅವರೊಂದಿಗೆ ಒಬ್ಬನೇ ಒಬ್ಬ ಬಾಡಿಗಾರ್ಡ್ ಇರುವುದಿದ್ದರೆ ಅದು ನಾನಾಗಿದ್ದೆ’ ಎಂದು ಭಾವುಕರಾಗಿದ್ದಾರೆ.
ತಮ್ಮೊಂದಿಗಿದ್ದ ಹಳೇಯ ಮಾರುತಿ ಸುಜುಕಿ 800 ಕಾರ್ ಬಗ್ಗೆ ಸಿಂಗ್ ಅವರಿಗಿದ್ದ ಪ್ರೀತಿಯನ್ನು ಅಸಿಂ ಉಲ್ಲೇಖಿಸಿದ್ದಾರೆ. ಅಧಿಕೃತ ಪ್ರಯಾಣಕ್ಕೆ ಭಾರಿ ಭದ್ರತೆ ಇರುವ ಬಿಎಂಡಬ್ಲ್ಯು ಕಾರುಗಳು ಇದ್ದರೂ, ಸಿಂಗ್ ಅವರು ಮಾರುತಿ ಕಾರ್ನ ಪ್ರಯಾಣವನ್ನೇ ಬಯಸುತ್ತಿದ್ದರು ಎಂದು ಹೇಳಿದ್ದಾರೆ.
‘ಅಸಿಂ, ನನಗೆ ಈ ಕಾರು (ಬಿಎಂಡಬ್ಲ್ಯು) ಕಾರು ಇಷ್ಟವಿಲ್ಲ. ನನ್ನ ಕಾರು ಮಾರುತಿ’ ಎಂದು ಸಿಂಗ್ ಅವರು ಹೇಳಿದ್ದನ್ನು ಅಸಿಂ ಮೆಲುಕು ಹಾಕಿದ್ದಾರೆ.
ಭಾರಿ ಭದ್ರತೆ ಇದ್ದ ಬಿಎಂಡಬ್ಲ್ಯುಕಾರಿನ ಕುರಿತು ಅವರಿಗೆ ವಿವರಿಸಿದರೂ, ಅವರ ನೋಟ ಯಾವತ್ತೂ ಮಾರುತಿ ಕಾರ್ನ ಕಡೆಗೇ ಇರುತ್ತಿತ್ತು ಎಂದು ಅಸಿಂ ಹೇಳಿದ್ದಾರೆ.
‘ಮಧ್ಯಮ ವರ್ಗ ಹಾಗೂ ಸಾಮಾನ್ಯ ಜನರ ಬಗ್ಗೆ ಅವರಿದ್ದ ಕಾಳಜಿ, ಅವರ ಬದ್ಧತೆಯನ್ನು ಇದು ತೋರಿಸುತ್ತದೆ. ಬಿಎಂಡಬ್ಲ್ಯು ಪ್ರಧಾನ ಮಂತ್ರಿ ಸ್ಥಾನದ ಹಿರಿಮೆಯನ್ನು ಸಂಕೇತಿಸಬಹುದಾದರೂ, ಹೃದಯದಲ್ಲಿ ಅವರ ಮಾರುತಿಯನ್ನು ತನ್ನ ಕಾರಿನಂತೆ ಕಂಡರು’ ಎಂದು ಅಸಿಂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.