ADVERTISEMENT

ರೆಸಾರ್ಟ್‌ನಿಂದ ಮರಳಿದ ಜಾರ್ಖಂಡ್‌ ಶಾಸಕರು

ಪಿಟಿಐ
Published 4 ಸೆಪ್ಟೆಂಬರ್ 2022, 13:30 IST
Last Updated 4 ಸೆಪ್ಟೆಂಬರ್ 2022, 13:30 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ರಾಯಪುರ: ಛತ್ತೀಸ್‌ಗಡ ರಾಜಧಾನಿ ರಾಯಪುರ ಸಮೀಪದ ರೆಸಾರ್ಟ್‌ನಲ್ಲಿ ಕಳೆದ ಆಗಸ್ಟ್‌ 30ರಿಂದ ತಂಗಿದ್ದಜಾರ್ಖಂಡ್‌ನ ಆಡಳಿತಾರೂಢ ಯುಪಿಎ ಮೈತ್ರಿಕೂಟದ ಕನಿಷ್ಠ 30 ಶಾಸಕರು ಭಾನುವಾರ ಮಧ್ಯಾಹ್ನ ಜಾರ್ಖಂಡ್‌ಗೆ ಮರಳಿದ್ದಾರೆ.

ಸೋಮವಾರ ನಿಗದಿಯಾಗಿರುವ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಭಾಗಿಯಾಗುವ ಸಲುವಾಗಿ ರಾಂಚಿಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ಅಧಿವೇಶನದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ವಿಶ್ವಾಸಮತ ಯಾಚಿಸಲಿದ್ದಾರೆ.

30 ಶಾಸಕರು ಹಾಗೂ ಜೆಎಂಎಂ, ಕಾಂಗ್ರೆಸ್‌ ಪಕ್ಷದ ಕೆಲ ನಾಯಕರಿದ್ದ ವಿಶೇಷ ವಿಮಾನವು ರಾಯಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಿಂದ ಭಾನುವಾರ ಮಧ್ಯಾಹ್ನ 3:45ಕ್ಕೆ ಹೊರಟಿತು ಎಂದು ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದ್ದಾರೆ.

ADVERTISEMENT

ಪೊಲೀಸ್‌ ಬೆಂಗಾವಲು ವಾಹನದೊಂದಿಗೆ ಬಸ್‌ನಲ್ಲಿ ಶಾಸಕರು ಮತ್ತು ಇತರ ನಾಯಕರನ್ನು ವಿಮಾನ ನಿಲ್ದಾಣಕ್ಕೆ ಕರೆತರಲಾಗಿತ್ತು. ವಿಮಾನ ಹತ್ತುವ ಮೊದಲು ಶಾಸಕರು ಮಾಧ್ಯಮಗಳತ್ತ ಕೈಬೀಸಿದರು.

ಆಡಳಿತರೂಢ ಮೈತ್ರಿಕೂಟದ ಶಾಸಕರನ್ನು ಬಿಜೆಪಿ ಸೆಳೆಯುವ ಭೀತಿ ಇದ್ದ ಕಾರಣ, ಮೈತ್ರಿಕೂಟವು ತನ್ನ ಶಾಸಕರನ್ನು ರಾಯಪುರದ ಐಷಾರಾಮಿ ರೆಸಾರ್ಟ್‌ಗೆ ಸ್ಥಳಾಂತರಿಸಿತ್ತು. ಒಟ್ಟು 32 ಶಾಸಕರು ಆಗಸ್ಟ್‌ 30ರಿಂದ ಮೇಫೇರ್ ಗಾಲ್ಫ್ ರೆಸಾರ್ಟ್‌ನಲ್ಲಿ ತಂಗಿದ್ದರು. ಈ ಪೈಕಿ ನಾಲ್ವರು ಶಾಸಕರುಗುರುವಾರ ನಡೆದ ಸಂಪುಟ ಸಭೆಯಲ್ಲಿ ಭಾಗಿಯಾಗಲು ರಾಂಚಿಗೆ ಮರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.