ADVERTISEMENT

ನಿನ್ನೆ ಎಮ್ಮೆ, ಇಂದು ಹಸುವಿಗೆ ಗುದ್ದಿದ ವಂದೇ ಭಾರತ್‌ ರೈಲು: ಮತ್ತೆ ಹಾನಿ!

ಪಿಟಿಐ
Published 7 ಅಕ್ಟೋಬರ್ 2022, 14:40 IST
Last Updated 7 ಅಕ್ಟೋಬರ್ 2022, 14:40 IST
ಹಸುವಿಗೆ ಗುದ್ದಿ ಹಾನಿಗೀಡಾಗಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು
ಹಸುವಿಗೆ ಗುದ್ದಿ ಹಾನಿಗೀಡಾಗಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು    

ವಡೋದರಾ: ನಿನ್ನೆ (ಅ.06, ಗುರುವಾರ) ಎಮ್ಮೆಗಳ ಹಿಂಡಿಗೆ ಗುದ್ದಿ ಹಾನಿಗೀಡಾಗಿದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು, ಇಂದು (ಅ. 07, ಶುಕ್ರವಾರ) ಹಸುವಿಗೆ ಗುದ್ದಿದೆ. ಹೀಗಾಗಿ ರೈಲಿನ ಮುಂಭಾಗ ಅಲ್ಪ ಪ್ರಮಾಣದಲ್ಲಿ ಜಖಂಗೊಂಡಿದೆ.

‘ಮುಂಬೈನಿಂದ ಸುಮಾರು 433 ಕಿ.ಮೀ ದೂರದಲ್ಲಿರುವ ಕಂಜಾರಿ ಮತ್ತು ಆನಂದ್ ನಿಲ್ದಾಣಗಳ ನಡುವೆ ಮಧ್ಯಾಹ್ನ 3.49ರಲ್ಲಿ ಈ ಘಟನೆ ನಡೆದಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ’ ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ತಿಳಿಸಿದ್ದಾರೆ. ರೈಲು ಗುಜರಾತ್‌ನಿಂದ ಮುಂಬೈಗೆ ತೆರಳುತ್ತಿತ್ತು.

‘ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ರೈಲಿನ ಮುಂಭಾಗ ಅಲ್ಪ ಪ್ರಮಾಣದಲ್ಲಿ ಜಖಂ (ಡೆಂಟ್‌) ಆಗಿದೆ. ರೈಲು ನಿಲುಗಡೆಯಾದ ಒಂದೇ ನಿಮಿಷದಲ್ಲಿ ಮತ್ತೆ ಪ್ರಯಾಣ ಆರಂಭಿಸಿತು’ ಎಂದು ಅವರು ಹೇಳಿದರು.

ADVERTISEMENT

ಅಪಘಾತದಲ್ಲಿ ಹಸು ಬದುಕುಳಿದಿದೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ಗುರುವಾರ ಮುಂಬೈನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದ ವೇಳೆ ವತ್ವಾ ಮತ್ತು ಮಣಿನಗರ ರೈಲು ನಿಲ್ದಾಣಗಳ ನಡುವೆ ರೈಲು ನಾಲ್ಕು ಎಮ್ಮೆಗಳಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ನಾಲ್ಕು ಎಮ್ಮೆಗಳು ಮೃತಪಟ್ಟರೆ, ರೈಲಿನ ಮುಂಭಾಗಕ್ಕೆ ಹಾನಿಯುಂಟಾಗಿತ್ತು.

ರೈಲಿನ ಮುಂಭಾಗವನ್ನು ಶುಕ್ರವಾರವಷ್ಟೇ ದುರಸ್ತಿ ಮಾಡಿ, ರೈಲಿಗೆ ಮರಳಿ ಚಾಲನೆ ನೀಡಲಾಗಿತ್ತು. ದುರಸ್ತಿಯಾದ ದಿನವೇ ರೈಲಿಗೆ ಮತ್ತೊಂದು ಅಪಘಾತವಾಗಿದೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.