ADVERTISEMENT

ಎರಡನೇ ಹಂತದಲ್ಲಿ 10 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ SIR: ಚುನಾವಣಾ ಆಯೋಗ

ಪಿಟಿಐ
Published 27 ಅಕ್ಟೋಬರ್ 2025, 16:00 IST
Last Updated 27 ಅಕ್ಟೋಬರ್ 2025, 16:00 IST
<div class="paragraphs"><p>ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್</p></div>

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್

   

ನವದೆಹಲಿ: ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕೈಗೊಳ್ಳಲು ಕೇಂದ್ರ ಚುನಾವಣಾ ಆಯೋಗ ಮುಂದಡಿಯಿಟ್ಟಿದ್ದು ಎರಡನೇ ಹಂತದಲ್ಲಿ 10 ರಾಜ್ಯ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಗುವುದು ಎಂದು ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸೋಮವಾರ ಹೇಳಿದ್ದಾರೆ. 

ಸೋಮವಾರ ಸುದ್ದಿಗೋಷ್ಠಿಯಲ್ಲಿ ವೇಳಾ‍‍ಪಟ್ಟಿ ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌, ‘ಈಗ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆಯು ಸ್ವಾತಂತ್ರ್ಯದ ಬಳಿಕ ನಡೆಯುತ್ತಿರುವ ಒಂಬತ್ತನೇ ಪ್ರಕ್ರಿಯೆಯಾಗಿದೆ. 2002–04ರಲ್ಲಿ ಕೊನೆಯದಾಗಿ ಎಸ್‌ಐಆರ್ ನಡೆದಿತ್ತು’ ಎಂದು ಹೇಳಿದರು.

ADVERTISEMENT

ಎರಡನೇ ಹಂತದಲ್ಲಿ ಎಸ್‌ಐಆರ್‌ ನಡೆಯಲಿರುವ ತಮಿಳುನಾಡು, ಪುದುಚೇರಿ, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ 2026ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಸ್ಸಾಂನಲ್ಲೂ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಅಲ್ಲಿನ ಎಸ್‌ಐಆರ್‌ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ಘೋಷಿಸಲಾಗುವುದು ಎಂದು ಜ್ಞಾನೇಶ್‌ ಕುಮಾರ್‌ ಸ್ಪಷ್ಟಪಡಿಸಿದರು.

ಮೊದಲ ಹಂತದಲ್ಲಿ ಎಸ್‌ಐಆರ್‌ ನಡೆದ ಬಿಹಾರದಲ್ಲಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಪಟ್ಟಿಗೆ ಸಂಬಂಧಿಸಿದಂತೆ ಅಲ್ಲಿ ಯಾವುದೇ ಮೇಲ್ಮನವಿ ಸಲ್ಲಿಕೆಯಾಗಿಲ್ಲ ಎಂಬುದನ್ನು ಅವರು ಒತ್ತಿ ಹೇಳಿದರು. ‘ಯಾವುದೇ ಅರ್ಹ ಮತದಾರ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ಯಾವುದೇ ಅನರ್ಹ ಮತದಾರಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆಯದಂತೆ ಎಸ್‌ಐಆರ್ ಖಚಿತಪಡಿಸುತ್ತದೆ’ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿರುವ ಕೇರಳದಲ್ಲಿ ಎಸ್‌ಐಆರ್‌ಅನ್ನು ಮುಂದೂಡಬೇಕೆಂಬ ಮನವಿಯ ಕುರಿತ ಪ್ರಶ್ನೆಗೆ ಅವರು, ‘ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಇದುವರೆಗೆ ಯಾವುದೇ ಅಧಿಸೂಚನೆ ಹೊರಡಿಸಲಾಗಿಲ್ಲ. ಆದ್ದರಿಂದ ಕೇರಳದಲ್ಲಿ ಎರಡನೇ ಹಂತದಲ್ಲಿ ಎಸ್ಐಆರ್‌ ನಡೆಸಲು ಆಯೋಗ ಮುಂದಾಗಿದೆ’ ಎಂದು ಹೇಳಿದರು.

ಎಸ್‌ಐಆರ್‌ ಕುರಿತು ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳೊಂದಿಗೆ (ಸಿಇಒ) ಕೇಂದ್ರ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಈಚೆಗೆ ಸಭೆ ನಡೆಸಿದ್ದರು. ತಮ್ಮ ತಮ್ಮ ರಾಜ್ಯಗಳಲ್ಲಿ ಕೊನೆಯದಾಗಿ ಎಸ್ಐಆರ್‌ ಪ್ರಕ್ರಿಯೆ ನಡೆದ ಬಳಿಕ ಪ್ರಕಟಿಸಲಾಗಿರುವ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚಿಸಿದ್ದರು.

ಹಲವು ರಾಜ್ಯಗಳ ಚುನಾವಣಾಧಿಕಾರಿಗಳು ತಮ್ಮ ಕೊನೆಯ ಎಸ್‌ಐಆರ್‌ ನಂತರ ಪ್ರಕಟವಾದ ಮತದಾರರ ಪಟ್ಟಿಗಳನ್ನು ಈಗಾಗಲೇ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. ಬಹುತೇಕ ರಾಜ್ಯಗಳಲ್ಲಿ 2002 ಮತ್ತು 2004ರ ನಡುವೆ ಕೊನೆಯದಾಗಿ ಎಸ್‌ಐಆರ್‌ ನಡೆದಿತ್ತು.

ಮತದಾರರು ಅಥವಾ ವಿರೋಧ ಪಕ್ಷಗಳು ಎಸ್‌ಐಆರ್‌ ಪ್ರಕ್ರಿಯೆ ಬಗ್ಗೆ ತೃಪ್ತಿ ಹೊಂದಿಲ್ಲ. ಚುನಾವಣಾ ಆಯೋಗದ ವಿಶ್ವಾಸಾರ್ಹತೆಯೇ ಅನುಮಾನದಲ್ಲಿದೆ
ಪವನ್‌ ಖೇರಾ, ಕಾಂಗ್ರೆಸ್‌ ನಾಯಕ

ಎರಡನೇ ಹಂತ ಎಲ್ಲೆಲ್ಲಿ?

ಅಂಡಮಾನ್‌ ಮತ್ತು ನಿಕೋಬಾರ್, ಲಕ್ಷದ್ವೀಪ, ಛತ್ತೀಸಗಢ, ಗೋವಾ, ಗುಜರಾತ್, ಕೇರಳ, ಮಧ್ಯ ಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ

51 ಕೋಟಿ: ಎರಡನೇ ಹಂತದಲ್ಲಿ ಎಸ್ಐಆರ್‌ ನಡೆಯಲಿರುವ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಒಟ್ಟು ಮತದಾರರು

ವೇಳಾಪಟ್ಟಿ

ನ.4; ಗಣತಿ ಪ್ರಕ್ರಿಯೆ ಆರಂಭ

ಡಿ.9; ಮತದಾರರ ಕರಡು ಪಟ್ಟಿ ಪ್ರಕಟ 2026ರ

ಫೆ.7; ಅಂತಿಮ ಪಟ್ಟಿ ಪ್ರಕಟ

ಬಿಹಾರದಲ್ಲಿ ಪ್ರಕ್ರಿಯೆ ಪೂರ್ಣ

ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಸೆಪ್ಟೆಂಬರ್‌ 30ರಂದು ಪ್ರಕಟಿಸಿದ ಅಂತಿಮ ಪಟ್ಟಿಯಲ್ಲಿ 7.42 ಕೋಟಿ ಮತದಾರರ ಹೆಸರುಗಳು ಇವೆ. ವಿಶೇಷ ಪರಿಷ್ಕರಣೆ ಬಳಿಕ 3.66 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಬಿಹಾರದ ಎಸ್‌ಐಆರ್‌ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಬಿಹಾರದಲ್ಲಿ ಎಸ್‌ಐಆರ್‌ ನಡೆಸಿದ ರೀತಿಯ ಕುರಿತು ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಮತದಾರರ ಪಟ್ಟಿಯಿಂದ ಕೈಬಿಡಲಾದ ಮತದಾರರಿಗೆ ಚುನಾವಣಾ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ನೆರವಾಗುವಂತೆ ಬಿಹಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಇದುವರೆಗೂ ಯಾವುದೇ ಮೇಲ್ಮನವಿ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತಿದೆ.  ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು ನವೆಂಬರ್‌ 6 ಹಾಗೂ 11ರಂದು ಮತದಾನ ಹಾಗೂ ನವೆಂಬರ್‌ 14ರಂದು ಮತ ಎಣಿಕೆ ನಡೆಯಲಿದೆ.

‘ಬಂಗಾಳ: ಅಡ್ಡಿ ಎದುರಾಗದು’

‘ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ ನಡೆಸಲು ಯಾವುದೇ ಅಡ್ಡಿ ಎದುರಾಗದು’ ಎಂಬುದನ್ನು ಚುನಾವಣಾ ಅಯೋಗ (ಇ.ಸಿ) ಪುನರುಚ್ಚರಿಸಿದೆ. ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ ನಡೆದರೆ ಅಲ್ಲಿ ‘ರಕ್ತಪಾತ’ ಆಗಲಿದೆ ಎಂದು ವರದಿಯಾಗಿರುವ ಬಗ್ಗೆ ಎದುರಾದ ಪ್ರಶ್ನೆಗೆ ಜ್ಞಾನೇಶ್‌ ಕುಮಾರ್‌ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ‘ಇ.ಸಿ ತನ್ನ ಕರ್ತವ್ಯ ನಿರ್ವಹಿಸುತ್ತಿದೆ ಮತ್ತು ರಾಜ್ಯ ಸರ್ಕಾರಗಳು ಸಾಂವಿಧಾನಿಕವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಬದ್ಧವಾಗಿವೆ. ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಸಂವಿಧಾನದಲ್ಲಿ ತಿಳಿಸಿರುವಂತೆ ತಮ್ಮ ಜವಾಬ್ದಾರಿ ನಿರ್ವಹಿಸುತ್ತವೆ’ ಎಂದು ಹೇಳಿದರು. ‘ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಮತದಾರರ ಪಟ್ಟಿ ಸಿದ್ಧಪಡಿಸಲು ಮತ್ತು ಚುನಾವಣೆ ನಡೆಸಲು ಇ.ಸಿಗೆ ಅಗತ್ಯವಿರುವ ಸಿಬ್ಬಂದಿಯನ್ನು ಒದಗಿಸಲು ರಾಜ್ಯಗಳು ಬದ್ಧವಾಗಿವೆ’ ಎಂದರು.

ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ: ಕಾಂಗ್ರೆಸ್

ದೇಶದಾದ್ಯಂತ ಎಸ್‌ಐಆರ್‌ ನಡೆಸಲು ಮುಂದಾಗಿರುವ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಬಗ್ಗೆ ಕಾಂಗ್ರೆಸ್‌ ಪಕ್ಷ ಸೋಮವಾರ ಪ್ರಶ್ನೆಗಳನ್ನು ಎತ್ತಿದೆ.  ‘ಬಿಹಾರದಲ್ಲಿ ನಡೆಸಿದ ಎಸ್‌ಐಆರ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನಮಗೆ ಇನ್ನೂ ಉತ್ತರಗಳು ಬಂದಿಲ್ಲ. ಬಿಹಾರದಲ್ಲಿ ಈ ಪ್ರಕ್ರಿಯೆಯಲ್ಲಿನ ಲೋಪಗಳನ್ನು ಸರಿಪಡಿಸಲು ಸುಪ್ರೀಂ ಕೋರ್ಟ್ ಹಲವು ಬಾರಿ ಮಧ್ಯಪ್ರವೇಶಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು’ ಎಂದು ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಎಸ್‌ಐಆರ್‌ ಪ್ರಕ್ರಿಯೆ ನಡೆದಾಗಲೆಲ್ಲಾ ಚುನಾವಣಾ ಆಯೋಗದವರು ಪ್ರತಿ ಮನೆಗೆ ಹೋಗಿ ಹೊಸ ಮತದಾರರನ್ನು ಸೇರಿಸುತ್ತಾರೆ ಮತ್ತು ಕೈಬಿಡಬೇಕಾದವರ ಹೆಸರನ್ನು ಪಟ್ಟಿಯಿಂದ ಆಳಿಸುತ್ತಾರೆ. ಆದರೆ ಬಿಹಾರದಲ್ಲಿ ಒಬ್ಬನೇ ಒಬ್ಬ ಮತದಾರನನ್ನೂ ಪಟ್ಟಿಗೆ ಸೇರಿಸಿಲ್ಲ. ಆದರೆ 65 ಲಕ್ಷ ಮತಗಳನ್ನು ಅಳಿಸಲಾಗಿದೆ. ಇದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ’ ಎಂದು ಖೇರಾ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.