ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
ತಿರುವನಂತಪುರ: ವಯನಾಡ್ ಭೂಕುಸಿತದಲ್ಲಿ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರ ಸರ್ಕಾರದಿಂದ ಇದುವರೆಗೆ ಯಾವುದೇ ನೆರವು ಬಂದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ಹೇಳಿದ್ದಾರೆ.
ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಯಲ್ಲಿ ಸಂಗ್ರಹವಾಗಿರುವ ₹712.98 ಕೋಟಿ ಹಣವನ್ನು ಸಂತ್ರಸ್ತರಿಗೆ ನೆರವಾಗಲು ಬಳಸಿಕೊಳ್ಳಲಾಗುವುದು ಎಂದು ವಿಜಯನ್ ಹೇಳಿದ್ದಾರೆ.
ರಾಜ್ಯ ಸರ್ಕಾರವು ಆರಂಭದಲ್ಲಿ ಪುನರ್ವಸತಿ ಕಾರ್ಯಕ್ಕೆ ಕೇಂದ್ರದಿಂದ ₹2,221 ಕೋಟಿ ಕೇಳಿತ್ತು. ಆದರೆ ವಿಪತ್ತು ನಂತರದ ಅಗತ್ಯಗಳ ಪರಿಶೀಲನಾ ವರದಿಯ ಪ್ರಕಾರ ಹೆಚ್ಚಿನ ಮೊತ್ತವನ್ನು ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘ವಯನಾಡ್ ದುರಂತವನ್ನು ಕೇಂದ್ರ ಸರ್ಕಾರವು ತೀವ್ರ ಸ್ವರೂಪದ ವಿಪತ್ತು ಎಂದು ಘೋಷಿಸಿರುವ ಕಾರಣ ದೇಶದ ಯಾವುದೇ ಸಂಸದ ₹1 ಕೋಟಿಯವರೆಗೆ ನೆರವು ನೀಡಬಹುದು. ನೆರವು ಕೋರಿ ನಾನು ಎಲ್ಲ ಸಂಸದರಿಗೆ ಪತ್ರ ಬರೆದಿದ್ದೇನೆ’ ಎಂದು ಅವರು ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕರೊಬ್ಬರ ಪ್ರಶ್ನೆಗೆ ಉತ್ತರವಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.