
ತಂಗಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ವಯನಾಡ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ತಂಗಿ ಪ್ರಿಯಾಂಕಾ ಗಾಂಧಿ ಬಗ್ಗೆ ಒಂದು ಆಸಕ್ತಿದಾಯಕ ಘಟನೆಯನ್ನು ಹಂಚಿಕೊಂಡಿದ್ದಾರೆ.
ಯಾವುದೇ ಮಾತುಕತೆಗಿಂತಲೂ ನಮ್ಮ ನಡುವಿನ ಮನಸ್ತಾಪವನ್ನು ವಯನಾಡ್ ಪರಿಹರಿಸಿತು ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
2024ರ ವಯನಾಡ್ ಭೂಕುಸಿತದಲ್ಲಿ ಸಂತ್ರಸ್ತರಾದವರಿಗೆ ಕಾಂಗ್ರಸ್ ನಿರ್ಮಾಣ ಮಾಡುತ್ತಿರುವ ಮನೆಗಳ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ರಾಹುಲ್ ಗಾಂಧಿ ಮಾತನಾಡಿದರು.
ವಯನಾಡಿನ ಜನರು ನಮ್ಮ ಕುಟುಂಬದವರಂತೆ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ತಮ್ಮ ಮನೆಯಲ್ಲಿ ನಡೆದ ಮನಸ್ತಾಪದ ಘಟನೆಯ ಬಗ್ಗೆ ಸಭಿಕರಿಗೆ ವಿವರಿಸಿದರು.
ಪ್ರಿಯಾಂಕಾ ನನ್ನೊಂದಿಗೆ ಮಾತನಾಡುತ್ತಿರಲಿಲ್ಲ. ಪರಿಸ್ಥಿತಿ ಅಷ್ಟು ಗಂಭೀರವಾಗಿತ್ತು. ಅಮ್ಮ, ಸಹೋದರಿಯ ಬಗ್ಗೆ ಕೇಳಿದಾಗ, ಅವಳು ಬೇಸರಗೊಂಡಿದ್ದಾಳೆ ಮತ್ತು ನನ್ನೊಂದಿಗೆ ಮಾತನಾಡುತ್ತಿಲ್ಲ ಎಂದು ತಿಳಿಸಿದೆ. ಬಳಿಕ ಅಮ್ಮ ತನ್ನ ‘ತಂತ್ರ’ವನ್ನು ಬಹಿರಂಗಪಡಿಸಿ, ನೀವು ವಯನಾಡಿಗೆ ಒಟ್ಟಿಗೆ ಪ್ರಯಾಣ ಮಾಡುವ ಯೋಜನೆ ರೂಪಿಸಿದ್ದಾಗಿ ಹೇಳಿದರು.
ನಾನು ಅಮ್ಮನಿಗೆ ಅವಳನ್ನು ಮನವೊಲಿಸಿದ್ದೇನೆ ಎಂದು ತಿಳಿಸಿದೆ. ವಯನಾಡಿಗೆ ಬಂದ ನಂತರ ಸಹೋದರಿ ನನ್ನೊಂದಿಗೆ ಮಾತನಾಡದೇ ಇರಲು ಸಾಧ್ಯವಾಗಲಿಲ್ಲ ಎಂದರು.
ಆದರೆ ಈ ಯೋಜನೆ ತಕ್ಷಣಕ್ಕೆ ಫಲ ನೀಡಲಿಲ್ಲವೆಂದು ರಾಹುಲ್ ಒಪ್ಪಿಕೊಂಡರು. ವಿಮಾನ ಪ್ರಯಾಣದ ವೇಳೆ ಕೂಡ ಮಾತನಾಡಲಿಲ್ಲ, ಆದರೆ ನಾವು ವಯನಾಡಿಗೆ ತಲುಪಿದ ಕ್ಷಣದಿಂದಲೇ ನನ್ನೊಂದಿಗೆ ಮಾತನಾಡಲು ಆರಂಭಿಸಿದಳು. ಇದೇ ವಯನಾಡಿನ ಮಂತ್ರ ಎಂದು ರಾಹುಲ್ ಹೇಳಿದರು.
2024ರ ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡ್ ಹಾಗೂ ಉತ್ತರ ಪ್ರದೇಶದ ರಾಯ್ಬರೇಲಿ ಕ್ಷೇತ್ರಗಳಿಂದ ರಾಹುಲ್ ಗಾಂಧಿ ಗೆಲುವು ಸಾಧಿಸಿದ್ದರು. ನಂತರ ವಯನಾಡ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಪ್ರಸ್ತುತ ಈ ಕ್ಷೇತ್ರವನ್ನು ಪ್ರಿಯಾಂಕ ಗಾಂಧಿ ಪ್ರತಿನಿಧಿಸುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡನ್ನು ಪ್ರತಿನಿಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.