ADVERTISEMENT

ಪಶ್ಚಿಮ ಏಷ್ಯಾ ಸಂಘರ್ಷ: ಭಯಾನಕ ಅನುಭವ ತೆರೆದಿಟ್ಟ ಪ್ರಯಾಣಿಕರು

ಪಿಟಿಐ
ಏಜೆನ್ಸೀಸ್
Published 3 ಮಾರ್ಚ್ 2026, 23:18 IST
Last Updated 3 ಮಾರ್ಚ್ 2026, 23:18 IST
<div class="paragraphs"><p>ಅಬುಧಾಬಿಯಿಂದ ಮುಂಬೈಗೆ&nbsp; ಮಂಗಳವಾರ ಬಂದಿಳಿದ ಮಹಿಳೆಯೊಬ್ಬರು ತಮ್ಮ ಮಕ್ಕಳನ್ನು ಮುದ್ದಾಡಿದರು</p></div>

ಅಬುಧಾಬಿಯಿಂದ ಮುಂಬೈಗೆ  ಮಂಗಳವಾರ ಬಂದಿಳಿದ ಮಹಿಳೆಯೊಬ್ಬರು ತಮ್ಮ ಮಕ್ಕಳನ್ನು ಮುದ್ದಾಡಿದರು

   

–ಪಿಟಿಐ ಚಿತ್ರ

ಚೆನ್ನೈ/ ಮುಂಬೈ: ಸಂಘರ್ಷ ಪೀಡಿತ ಪ್ರದೇಶದಲ್ಲಿ ಬಾಂಬ್‌ ಮತ್ತು ಕ್ಷಿಪಣಿ ಸ್ಫೋಟದ ಸದ್ದು ಭೀಕರವಾಗಿತ್ತು, ಪ್ರಯಾಣಿಕರಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು ಎಂದು ದುಬೈನಿಂದ ವಾಪಸಾದ ಭಾರತೀಯರು ಮಂಗಳವಾರ ತಮ್ಮ ಅನುಭವವನ್ನು ಹಂಚಿಕೊಂಡರು.

ADVERTISEMENT

ದುಬೈಗೆ ಪ್ರವಾಸ ಬಂದಿದ್ದ ಅನೇಕರು ತವರಿಗೆ ವಾಪಸಾಗಲು ಸಾಧ್ಯವಾಗದೆ ಅತಂತ್ರರಾಗಿದ್ದರು. ಭಾರತಕ್ಕೆ ಸುರಕ್ಷಿತವಾಗಿ ವಾಪಸಾದ ಬಳಿಕ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.

ಭಾನುವಾರವೇ ಚೆನ್ನೈಗೆ ತಲುಪಬೇಕಿದ್ದ ಶುಭಾ ಅವರು ತಾವು ಕಳೆದ ಆತಂಕದ ಕ್ಷಣಗಳನ್ನು ಬಿಚ್ಚಿಟ್ಟರು.

‘ನ್ಯೂಯಾರ್ಕ್‌ನಿಂದ ಪ್ರಯಾಣಿಸುತ್ತಿದ್ದೆ. ದುಬೈನಲ್ಲಿ  ವಿಮಾನವು ನಿಂತ ಬಳಿಕ ‘ದುಬೈ ವಾಯುಪ್ರದೇಶವನ್ನು ನಿರ್ಬಂಧಿಸಲಾಗಿದೆ’ ಎಂದು ವಿಮಾನಯಾನ ಸಂಸ್ಥೆ ಘೋಷಿಸಿತು. ಅಲ್ಲಿಂದ ನಮ್ಮನ್ನು ಹೋಟೆಲ್‌ಗೆ ಕರೆದೊಯ್ಯಲಾಗಿತ್ತು. ಸ್ಫೋಟದ ಸದ್ದು ಕೇಳುತ್ತಿತ್ತು. ರಾತ್ರಿ ಹೊತ್ತು ಕ್ಷಿಪಣಿಗಳೂ ಕಾಣಿಸುತ್ತಿದ್ದವು’ ಎಂದು ವಿವರಿಸಿದರು.

ಚೆನ್ನೈ ನಿವಾಸಿ ಕಾರ್ತಿಕ್‌ ಅವರು, ‘ಕುಟುಂಬದೊಂದಿಗೆ ದುಬೈಗೆ ಪ್ರವಾಸ ಹೋಗಿದ್ದೆವು. ಶನಿವಾರವೇ ನಾವು ಮರಳಬೇಕಿತ್ತು. ಅಲ್ಲಿ ಕಳೆದಷ್ಟೂ ಸಮಯ ಭಯಾನಕವಾಗಿತ್ತು’ ಎಂದು ತಿಳಿಸಿದರು.

ಮತ್ತೊಬ್ಬ ಪ್ರಯಾಣಿಕ ಸೈಯದ್‌ ಅಲಿ ಅವರು, ‘ದುಬೈ ವಿಮಾನ ನಿಲ್ದಾಣದಲ್ಲಿ ಉಂಟಾದ ಸನ್ನಿವೇಶದಿಂದ ಗಾಬರಿಗೊಂಡು ಕೆಲವು ಮಕ್ಕಳು ಅಳಲು ಆರಂಭಿಸಿದ್ದರು’ ಎಂದು ತಿಳಿಸಿದರು.

ಕೊಲ್ಹಾಪುರದಿಂದ ದುಬೈಗೆ ತೆರಳಿದ್ದ 23 ಪ್ರವಾಸಿಗರೂ ಮಂಗಳವಾರ ಮುಂಬೈಗೆ ಮರಳಿದರು. ‘ದುಬೈನಲ್ಲಿ ನಾವು ಉಳಿದುಕೊಂಡಿದ್ದ ಹೋಟೆಲ್‌ ಸಮೀಪ ಡ್ರೋನ್‌ ದಾಳಿ ನಡೆದಿತ್ತು. ಇದರಿಂದ ಆತಂಕಗೊಂಡಿದ್ದೆವು’ ಎಂದು ಅವರು ತಿಳಿಸಿದರು.

‘ನಮ್ಮ ಗುಂಪಿನ ಸದಸ್ಯರಿಗೆ ಯುಎಇ ಸರ್ಕಾರವು ₹25,000 ಮೌಲ್ಯದ ಉಡುಗೊರೆ ನೀಡಿದೆ’ ಎಂದು ಪ್ರವಾಸಿಗರೊಬ್ಬರು ತಿಳಿಸಿದರು.

ನಾಗರಿಕರಿಗೆ ಅಮೆರಿಕ ತಾಕೀತು

ಬರ್ಲಿನ್: ಬಿಕ್ಕಟ್ಟು ತೀವ್ರಗೊಂಡಿರುವ ಕಾರಣ ಸುರಕ್ಷತೆಯ ಹಿತದೃಷ್ಟಿಯಿಂದ ಪಶ್ಚಿಮ ಏಷ್ಯಾ ದೇಶಗಳಿಂದ ವಾಪಸ್‌ ಬರುವಂತೆ ತನ್ನ ನಾಗರಿಕರಿಗೆ ಅಮೆರಿಕ ಸೂಚಿಸಿದೆ.

ಪಶ್ಚಿಮ ಏಷ್ಯಾದಿಂದ ಬರುವ ಮತ್ತು ಹೋಗುವ ವಿಮಾನಗಳು ರದ್ದಾಗಿವೆ. ಗಲ್ಫ್‌ನ ವಾಯು ಪ್ರದೇಶವನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಯಾತ್ರಾರ್ಥಿಗಳು, ಪ್ರವಾಸಿಗರು, ರಾಜತಾಂತ್ರಿಕರು ಮತ್ತು ಅವರ ಕುಟುಂಬಸ್ಥರು ಸೇರಿದಂತೆ ಸಾವಿರಾರು ಮಂದಿ ಅತಂತ್ರರಾಗಿದ್ದಾರೆ.

ಸೀಮಿತ ಪ್ರಮಾಣದ ವಿಮಾನ ಸೇವೆ ಆರಂಭ
ಗಲ್ಫ್‌ ರಾಷ್ಟ್ರಗಳಲ್ಲಿ ಅತಂತ್ರರಾಗಿರುವ ಪ್ರಯಾಣಿಕರನ್ನು ಕರೆತರಲು ಸೀಮಿತ ಪ್ರಮಾಣದಲ್ಲಿ ವಿಮಾನಯಾನ ಸೇವೆಯನ್ನು ಮರು ಆರಂಭಿಸಲಾಗಿದೆ ಎಂದು ಭಾರತೀಯ ವಿಮಾನಯಾನ ಸಂಸ್ಥೆಗಳು ಮಂಗಳವಾರ ತಿಳಿಸಿವೆ. ಸೌದಿ ಅರೇಬಿಯಾದ ಜೆಡ್ಡಾದಿಂದ ನಾಲ್ಕು ವಿಮಾನಗಳನ್ನು ಆರಂಭಿಸಲಾಗಿದೆ ಎಂದು ‘ಇಂಡಿಗೊ’ ತಿಳಿಸಿದೆ. ಮಸ್ಕತ್‌ ರಾಜಧಾನಿ ಒಮಾನಿಯಿಂದ ವಿಮಾನಯಾನ ಸೇವೆ ಮರು ಆರಂಭಿಸಲಾಗಿದೆ ಎಂದು ‘ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌’ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.