ಕೋಲ್ಕತ್ತ: ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಖಾತರಿಯೇನು ಎಂದು ಪಶ್ಚಿಮ ಬಂಗಾಳ ಸಿಪಿಐ(ಎಂ) ಕಾರ್ಯದರ್ಶಿ ಸೂರ್ಯಕಾಂತ ಮಿಶ್ರಾ ಪ್ರಶ್ನಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆಯದಿದ್ದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೈಜೋಡಿಸುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.
ಎಡಪಕ್ಷಗಳ ಮೈತ್ರಿಕೂಟ ಸಂಯುಕ್ತ ಮೋರ್ಚಾ ಮಾತ್ರವಲ್ಲದೆ ಕಾಂಗ್ರೆಸ್ ಹಾಗೂ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಸಹ ಚುನಾವಣಾ ಅಕ್ರಮಗಳ ಬಗ್ಗೆ ಹಲವು ದೂರುಗಳನ್ನು ನೀಡಿವೆ. ಈ ಪೈಕಿ ಯಾವುದನ್ನೂ ಆಯೋಗ ಪರಿಗಣಿಸಿಲ್ಲ. ಆಯೋಗವು ಟಿಎಂಸಿ ಮತ್ತು ಬಿಜೆಪಿಯನ್ನು ಓಲೈಸುವುದರಲ್ಲೇ ನಿರತವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಅತಂತ್ರ ವಿಧಾನಸಭೆ ನಿರ್ಮಾಣವಾದಲ್ಲಿ ಎಡಪಕ್ಷಗಳ ಸಂಯುಕ್ತ ಮೋರ್ಚಾ ಮೈತ್ರಿಕೂಟವು ಟಿಎಂಸಿ ಜತೆ ಕೈಜೋಡಿಸಲಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಅವರು, ಇದು ಕಾಲ್ಪನಿಕ ಪ್ರಶ್ನೆಯಷ್ಟೇ ಎಂದು ಉತ್ತರಿಸಿದ್ದಾರೆ.
ಸಂಯುಕ್ತ ಮೋರ್ಚಾವು ರಾಜ್ಯದಲ್ಲಿ ಸರ್ಕಾರ ರಚಿಸುವ ಸಲುವಾಗಿ ಹೋರಾಡುತ್ತಿದೆ. ಬದಲಾಗಿ, ಟಿಎಂಸಿ ಮತ್ತು ಬಿಜೆಪಿ ಕೈಜೋಡಿಸುವುದನ್ನು ನೀವು ಕಾಣುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮೂರು ಹಂತಗಳ ಮತದಾನ ಈಗಾಗಲೇ ಮುಕ್ತಾಯಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.