ನವದೆಹಲಿ: ಅರುಣಾಚಲ ಪ್ರದೇಶದ ವಾಸ್ತವ ಗಡಿ ರೇಖೆ ಬಳಿ ಭಾರತ ಹಾಗೂ ಚೀನಾ ಸೈನಿಕರ ನಡುವಣ ಸಂಘರ್ಷದ ವಿಷಯವು ಲೋಕಸಭೆಯಲ್ಲಿ ಗುರುವಾರವೂ ಪ್ರತಿಧ್ವನಿಸಿದೆ.
ಈ ಕುರಿತು ಪ್ರಶ್ನೆ ಮಾಡಿರುವ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ಪ್ರಧಾನಿ ನರೇಂದ್ರ ಮೋದಿ, ಚೀನಾದ ಮೇಲೆ ಯಾವಾಗ ಕೆಂಗಣ್ಣು ಬೀರುತ್ತಾರೆ ಎಂದು ಕೇಳಿದ್ದಾರೆ.
ಡಿಸೆಂಬರ್ 9ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನ ವಾಸ್ತವ ಗಡಿ ರೇಖೆ ಬಳಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿದೆ ಎಂದು ವರದಿಯಾಗಿತ್ತು.
ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ, ಚೀನಾ ಭಾರತವನ್ನು ನಾಶ ಮಾಡಲು ಯತ್ನಿಸುತ್ತಿದೆ. ಆದರೆ ಮೋದಿ ಸರ್ಕಾರವು ನೆರೆಯ ರಾಷ್ಟ್ರದಿಂದ ಆಮದು ವೃದ್ಧಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಇಂದಿನ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಏಮ್ಸ್ ಮೇಲೆ ಸೈಬರ್ ದಾಳಿ ಚೀನಾದಿಂದ ನಡೆಸಲಾಗಿದೆ ಎಂದು ತಿಳಿಸಲಾಗಿದೆ. ಭಾರತ ವಿರುದ್ಧ ಚೀನಾ ಸಂಘರ್ಷ ನಡೆಸುತ್ತಿರುವಾಗ ಕೇಂದ್ರ ಸರ್ಕಾರವು ಆಮದು ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಮೋದಿ ಸರ್ಕಾರದ ಉದ್ದೇಶವೇ ತಿಳಿಯುತ್ತಿಲ್ಲ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.