ADVERTISEMENT

ಮರಾಠಿಗರಿರುವ ಕನ್ನಡ ನೆಲ ಮಹಾರಾಷ್ಟ್ರಕ್ಕೆ ಸೇರ್ಪಡೆ ಹೋರಾಟಕ್ಕೆ ಬೆಂಬಲ: ಪವಾರ್

ಪಿಟಿಐ
Published 1 ಮೇ 2022, 10:20 IST
Last Updated 1 ಮೇ 2022, 10:20 IST
ಅಜಿತ್ ಪವಾರ್, ಮಹಾರಾಷ್ಟ್ರ ಡಿಸಿಎಂ
ಅಜಿತ್ ಪವಾರ್, ಮಹಾರಾಷ್ಟ್ರ ಡಿಸಿಎಂ   

ಪುಣೆ: ಕರ್ನಾಟಕದ ಗಡಿ ಭಾಗಗಳ ಮರಾಠಿ ಭಾಷಿಕರು ಇರುವಸ್ಥಳಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಹೋರಾಟಕ್ಕೆ ತಮ್ಮ ಬೆಂಬಲವು ಮುಂದುವರಿಯಲಿದೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.

ಮಹಾರಾಷ್ಟ್ರದ ಸಂಸ್ಥಾಪನಾ ದಿನದ ಅಂಗವಾಗಿ ಭಾನುವಾರ ಪುಣೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, 'ಮಹಾರಾಷ್ಟ್ರ ಸಂಸ್ಥಾಪನೆಯ 62ನೇ ವರ್ಷದ ಸಂಭ್ರಮ ಆಚರಿಸುತ್ತಿದ್ದೇವೆ. ಆದರೆ ಮರಾಠಿ ಮಾತನಾಡುವವರು ಇರುವ ಕರ್ನಾಟಕದ ಬೀದರ್, ಭಾಲ್ಕಿ, ಬೆಳಗಾವಿ, ಕಾರವಾರ, ನಿಪ್ಪಾಣಿ ಮತ್ತು ಇತರೆ ಜಿಲ್ಲೆಗಳ ಗ್ರಾಮಗಳನ್ನು ರಾಜ್ಯದ ಜೊತೆ ವಿಲೀನಗೊಳಿಸಲಾಗದಿರುವುದಕ್ಕೆ ಪಶ್ಚಾತ್ತಾಪವಿದೆ' ಎಂದು ಹೇಳಿದರು.

ಮಹಾರಾಷ್ಟ್ರದ ಜನತೆ ಮತ್ತು ಸರ್ಕಾರವು ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಕರ್ನಾಟಕದ ಗಡಿ ಭಾಗಗಳ ಜನರ ಹೋರಾಟದ ಪರವಾಗಿರಲಿವೆ. ಕರ್ನಾಟಕದಲ್ಲಿರುವ ಗ್ರಾಮಗಳು ಮಹಾರಾಷ್ಟ್ರದ ಭಾಗವಾಗುವವರೆಗೆ ಅವರಿಗೆ ನಾವು ಸಹಕಾರ ನೀಡುತ್ತೇವೆ ಎಂದು ಹೇಳಿದ್ದಾರೆ.

ಕಳೆದ ಹಲವು ದಿನಗಳಿಂದ ಮರಾಠಿ ಭಾಷಿಕರು ಹೆಚ್ಚಾಗಿರುವ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಸೇರಿದಂತೆ ಕರ್ನಾಟಕದ ಹಲವು ಗ್ರಾಮಗಳು ತನ್ನದು ಎಂದು ಮಹಾರಾಷ್ಟ್ರ ಪ್ರತಿಪಾದಿಸುತ್ತಿದೆ. ಈ ಕುರಿತ ವ್ಯಾಜ್ಯವು ಸುಪ್ರೀಂ ಕೋರ್ಟ್‌ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.