ADVERTISEMENT

ಕೇಂದ್ರ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಆರೋಗ್ಯ ಸ್ಥಿತಿ ಗಂಭೀರ; ಐಸಿಯುಗೆ ದಾಖಲು

ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 14:34 IST
Last Updated 20 ಸೆಪ್ಟೆಂಬರ್ 2020, 14:34 IST
ರಾಮ್‌ವಿಲಾಸ್‌ ಪಾಸ್ವನ್‌ 
ರಾಮ್‌ವಿಲಾಸ್‌ ಪಾಸ್ವನ್‌    

ಪಟ್ನಾ: ಕೇಂದ್ರ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು ಅವರನ್ನು ತೀವ್ರ ನಿಗಾ ಘಟಕಕ್ಕೆ(ಐಸಿಯು) ಸ್ಥಳಾಂತರಿಸಲಾಗಿದೆ. ಅನಾರೋಗ್ಯದ ಕಾರಣದಿಂದ ಆ.24ರಂದು ಅವರು ನವದೆಹಲಿಯಲ್ಲಿರುವ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು.

ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಪತ್ರ ಬರೆದಿರುವ ಎಲ್‌ಜೆಪಿ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌, ‘ಕೋವಿಡ್‌–19 ಸಂದರ್ಭದಲ್ಲಿ ಆಹಾರ ಸಚಿವರಾಗಿರುವ ನನ್ನ ತಂದೆ ಕಳೆದ ಐದು ತಿಂಗಳಿಂದ ಬಡವರಿಗೆ ಮತ್ತು ಅಗತ್ಯವಿದ್ದವರಿಗೆ ಪಡಿತರ ತಲುಪುವಂತೆ ನೋಡಿಕೊಳ್ಳುವುದರಲ್ಲಿ ನಿರತರಾಗಿದ್ದರು. ಈ ಕಾರಣದಿಂದಾಗಿ, ಆರೋಗ್ಯದ ಮೇಲೆ ಗಮನಹರಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಪ್ರಸ್ತುತ ಅವರು ದೆಹಲಿಯ ಆಸ್ಪತ್ರೆಯಲ್ಲಿ ಕಳೆದ ಮೂರು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಬಿಹಾರಕ್ಕೆ ಹೋಗುವ ಇಚ್ಛೆ ಇತ್ತು. ಅಲ್ಲಿ ಎನ್‌ಡಿಎ ಒಳಗಿನ ಸೀಟು ಹಂಚಿಕೆ ಚರ್ಚೆಯನ್ನು ಅಂತಿಮಗೊಳಿಸುವ ಬಯಕೆ ಇತ್ತು. ಆದರೆ ಅನಾರೋಗ್ಯದ ಕಾರಣದಿಂದ ಇದು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ನಾನೂ ಅವರನ್ನು ಏಕಾಂಗಿಯಾಗಿ ಬಿಟ್ಟು ಬರಲು ಸಾಧ್ಯವಿಲ್ಲ’ ಎಂದಿದ್ದಾರೆ.

ಚಿರಾಗ್‌,ಬಿಹಾರದಲ್ಲಿ ಎನ್‌ಡಿಎ ಮೈತ್ರಿಯೊಂದಿಗೆ ಇದ್ದರೂ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ವಿರುದ್ಧವಾಗಿದ್ದಾರೆ. ಕಳೆದ ಕೆಲ ತಿಂಗಳಿಂದ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲು ಬಿಹಾರದಾದ್ಯಂತ ಚಿರಾಗ್‌ ಪ್ರವಾಸವನ್ನೂ ನಡೆಸಿದ್ದರು. ‘ನಿತೀಶ್‌ ಕುಮಾರ್‌ ಅವರು ‘ಸಾತ್ ನಿಶ್ಚಯ್‌’ ಯೋಜನೆಯನ್ನು ಮುಂದಿಟ್ಟುಕೊಂಡು ಹೊರಟಿದ್ದಾರೆ. ಇದು ಎನ್‌ಡಿಎ ರೂಪಿಸಿದ ಯೋಜನೆಯಲ್ಲ. ನಿತೀಶ್‌ ಅವರು ಕಾಂಗ್ರೆಸ್‌ ಹಾಗೂ ಆರ್‌ಜೆಡಿ ಜೊತೆ ಮಹಾಘಟಬಂಧನ್‌ನಲ್ಲಿ ಇದ್ದ ಸಂದರ್ಭದಲ್ಲಿ ರಚಿಸಿದ ಯೋಜನೆ ಇದು’ ಎಂದು ಪತ್ರದಲ್ಲಿ ಚಿರಾಗ್‌ ಉಲ್ಲೇಖಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.