ಸಮುದ್ರ ಸೇತುವೆ ಅಂಚಿನಲ್ಲಿ ನಿಂತು ಗಾಯಕನ ದುಸ್ಸಾಹಸ
ಮುಂಬೈ: ಇಲ್ಲಿನ ಬಾಂದ್ರಾ ವರ್ಲಿ ಸಮುದ್ರ ಸಂಪರ್ಕ ಸೇತುವೆಯ ಅಂಚಿನಲ್ಲಿ ನಿಂತು ಅಪಾಯಕಾರಿ ಸಾಹಸ ಮಾಡಿದ್ದ ಬಾಲಿವುಡ್ ಗಾಯಕ, ಗೀತರಚನೆಕಾರ ಯಾಸರ್ ದೇಸಾಯಿ ಮತ್ತು ಇತರ ಇಬ್ಬರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯಾಸರ್ ಅವರು ರಭಸವಾಗಿ ಬೀಸುತ್ತಿದ್ದ ಗಾಳಿಯ ನಡುವೆ ಸಮುದ್ರ ಸೇತುವೆಯ ಅಂಚಿನಲ್ಲಿ ನಿಂತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
‘ನೋಡುಗರೊಬ್ಬರು ಯಾಸರ್ ಸೇತುವೆ ಮೇಲೆ ನಿಂತಿರುವುದನ್ನು ಹಾಗೂ ಅವರ ಜೊತೆಗಿದ್ದ ಇಬ್ಬರು ಕೆಳಕ್ಕೆ ನಿಂತು ಚಿತ್ರೀಕರಿಸುತ್ತಿದ್ದ ಬಗ್ಗೆ ಹಾಗೂ ನಂತರ ಕಾರನ್ನು ಹತ್ತಿ ತೆರಳಿದ್ದರ ಕುರಿತು ಮಾಹಿತಿ ನೀಡಿದ್ದರು. ಅವರ ಸಾಹಸದ ದೃಶ್ಯವನ್ನು ನೋಡುಗರು ವಿಡಿಯೊ ಮಾಡಿ ನಮಗೆ ಕಳುಹಿಸಿದ್ದರು, ವಿಡಿಯೊದಲ್ಲಿದ್ದ ದೃಶ್ಯ ಆಧರಿಸಿ ಕಾರು ಯಾರದ್ದೆಂದು ಪತ್ತೆಹಚ್ಚಲಾಯಿತು. ತನಿಖೆ ವೇಳೆ ಸೇತುವೆ ಮೇಲೆ ನಿಂತವರು ಯಾಸರ್ ದೇಸಾಯಿ ಎಂದು ತಿಳಿದು ಬಂದಿದೆ’ ಎಂದು ಪೊಲೀಸರು ವಿವರಿಸಿದ್ದಾರೆ.
ಘಟನೆಯ ಸಂಬಂಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಯಾಸರ್ ಮತ್ತು ಇತರ ಇಬ್ಬರನ್ನು ಪತ್ತೆ ಮಾಡಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.