ನವದೆಹಲಿ: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೂರ್ವಭಾವಿಯಾಗಿ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಇದೇ ವೇಳೆ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ಯೋಗ ಭಾರತದ ಪ್ರಮುಖ ಪರಂಪರೆಗಳಲ್ಲಿ ಒಂದಾಗಿದೆ. ಯೋಗ ಮಾಡುವುದರಿಂದ ನಮ್ಮ ಜೀವನಕ್ಕೆ ಹೊಸ ಶಕ್ತಿ ಮತ್ತು ಹೊಸ ಉತ್ಸಾಹ ದೊರೆಯುತ್ತದೆ’ ಎಂದು ತಿಳಿಸಿದ್ದಾರೆ.
ಎಂಟನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿಶ್ವದಾದ್ಯಂತ ಯೋಗದ ಸಂದೇಶವನ್ನು ಸಾರಲು ಆಯುಷ್ ಸಚಿವಾಲಯ ದೇಶದಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ದೆಹಲಿಯ ಕೆಂಪು ಕೋಟೆ ಸೇರಿದಂತೆ ದೇಶದ ಹಲವೆಡೆ ಪೂರ್ವಭಾವಿಯಾಗಿ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.
ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಯೋಗ ದಿನ ಆಚರಿಸುತ್ತಿರುವುದು ವಿಶೇಷ. ಈ ಸ್ಮರಣೆಗಾಗಿ 75 ಪಾರಂಪರಿಕ ತಾಣಗಳಲ್ಲಿ ಯೋಗ ಆಚರಿಸಲಾಗುತ್ತಿದೆ.
ಆಯುಷ್ ಇಲಾಖೆ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆ, ಪ್ರವಾಸೋದ್ಯಮ ಇಲಾಖೆ ಹಾಗೂ ಶ್ವಾಸ ಯೋಗ ಸಂಸ್ಥೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. ಯೋಗ ದಿನಾಚರಣೆಗೆ ದೇಶದ 75 ಐಕಾನಿಕ್ ಸ್ಥಳಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ರಾಜ್ಯದ ಹಂಪಿ, ಮೈಸೂರು, ಐಹೊಳೆ, ಗೋಳಗುಮ್ಮಟ ಸೇರಿವೆ. ಈ ಎಲ್ಲ ಸ್ಥಳಗಳಲ್ಲಿ ಯೋಗ ಪ್ರದರ್ಶನಕ್ಕೆ ದೇಶದ 100 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದ್ದು, ಹಂಪಿ ಕಾರ್ಯಕ್ರಮಕ್ಕೆ ಶ್ವಾಸ ಯೋಗ ಸಂಸ್ಥೆ ಆಯ್ಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.