ADVERTISEMENT

ಅಯೋಧ್ಯೆ ವಿವಾದ ಸಂಧಾನದಲ್ಲಿ ಮುಗಿಸಲು ಮುಸ್ಲಿಮರು ಮುಂದಾಗಬೇಕಿತ್ತು: ಯೋಗಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 10:49 IST
Last Updated 6 ನವೆಂಬರ್ 2019, 10:49 IST
   

ಲಖನೌ:ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದವನ್ನು ಸಂಧಾನದ ಮೂಲಕ ಪರಿಹರಿಸಿಕೊಳ್ಳಲು ಮುಸ್ಲಿಂ ಸಮುದಾಯ ಮುಂದಾಗಬೇಕಿತ್ತು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ವಿಚಾರಣೆಯನ್ನು ಅಕ್ಟೋಬರ್ 18ರೊಳಗೆ ಪೂರ್ಣಗೊಳಿಸುವ ಗಡುವನ್ನು ಸುಪ್ರೀಂ ಕೋರ್ಟ್‌ ಹಾಕಿಕೊಂಡ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

‘ವಿವಾದವನ್ನು ಸಂಧಾನದ ಮೂಲಕ ಪರಿಹರಿಸಿಕೊಳ್ಳಲು ಸುಪ್ರೀಂ ಕೋರ್ಟ್‌ ಸಮಯಾವಕಾಶ ನೀಡಿದ್ದಾಗ ಮುಸ್ಲಿಂ ಸಮುದಾಯದವರು ಅದಕ್ಕೆ ಮುಂದಾಗಿದ್ದರೆ ಒಳ್ಳೆಯದಿತ್ತು. ಆದರೆ ಹಾಗಾಗಲಿಲ್ಲ. ಜನರು ಸಕಾರಾತ್ಮಕವಾಗಿ ಯೋಚಿಸಿದಾಗ ಮಾತ್ರ ಪರಿಹಾರದತ್ತ ಸಾಗಬಹುದು. ಆದರೆ ಅವರು ಮೊಂಡುತನ ತೋರಿದರೆ ಸುಪ್ರೀಂ ಕೋರ್ಟ್‌ ಮಾತ್ರವೇ ನಿರ್ಧಾರ ಕೈಗೊಳ್ಳಬೇಕಷ್ಟೆ’ ಎಂದುನ್ಯೂಸ್‌ 18ಸುದ್ದಿತಾಣಕ್ಕೆ ನೀಡಿದ ಸಂದರ್ಶನದಲ್ಲಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

‘ಸತ್ಯಾಂಶಗಳು ಮತ್ತು ಸಾಕ್ಷಿಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ.ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ನಮಗೆ ಭರವಸೆಯಿದೆ ಹಾಗೂ ನಾವದನ್ನು ಪಾಲಿಸುತ್ತೇವೆ. ಈ ಹಿಂದೆಯೂ ನಾವು ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ನಾವು ಪಾಲಿಸಿದ್ದೇವೆ’ ಎಂದೂ ಯೋಗಿ ಹೇಳಿದ್ದಾರೆ.

ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದವನ್ನು ಸಂಧಾನದ ಮೂಲಕ ಪರಿಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಮಾರ್ಚ್‌ನಲ್ಲಿ ನಿರ್ದೇಶನ ನೀಡಿತ್ತು. ಅಲಹಾಬಾದ್ ಹೈಕೋರ್ಟ್‌ ಅಯೋಧ್ಯೆಯ ವಿವಾದಿತ ನಿವೇಶನ ಹಂಚಿಕೆ ಮಾಡಿ2010ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ 14 ಮೇಲ್ಮನವಿ ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದವು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.