ಬೆಂಗಳೂರು: ಅಕ್ರಮವಾಗಿ ಕೋಟಿಗಟ್ಟಲೆ ಹಣ ಹಾಗೂ ಮಣಗಟ್ಟಲೆ ಚಿನ್ನ ಇಟ್ಟುಕೊಂಡ ಆರೋಪಕ್ಕೆ ಒಳಗಾಗಿರುವ ಕೆಎಐಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್. ಸ್ವಾಮಿ ಹಾಗೂ ಬಿಡಿಎ ಎಂಜಿನಿಯರ್ ಆಫೀಸರ್ ಎನ್.ಜಿ. ಗೌಡಯ್ಯ ಅವರನ್ನು ಸಸ್ಪೆಂಡ್ ಮಾಡುವಂತೆ ಭ್ರಷ್ಟಾಚಾರ ನಿಗ್ರಹ ದಳ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
‘ಅಧಿಕಾರಿಗಳಿಬ್ಬರೂ ಆದಾಯ ಮೀರಿ ಆಸ್ತಿ ಗಳಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅಲ್ಲದೆ, ತನಿಖೆಗೆ ಸಹಕರಿಸದೆ ದುರ್ನಡತೆ ತೋರಿದ್ದಾರೆ’ ಎಂದು ಎಸಿಬಿ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅನ್ವಯವೇ ಸಸ್ಪೆಂಡ್ಗೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ವಾಮಿ ಮತ್ತು ಗೌಡಯ್ಯ ಅವರ ಮನೆ, ಕಚೇರಿಗಳೂ ಸೇರಿದಂತೆ 8 ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿದ್ದರು. ದಾಳಿ ವೇಳೆ ₹ 5.27 ಕೋಟಿ ಹಣ 20 ಕೆ.ಜಿ ಚಿನ್ನ ಸೇರಿದಂತೆ ಅಪಾರ ಆಸ್ತಿಪಾಸ್ತಿ ಪತ್ತೆಯಾಗಿತ್ತು.
ದಾಳಿ ಬಳಿಕ ಸ್ವಾಮಿ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಅವರು ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗೌಡಯ್ಯ ಮತ್ತು ಅವರ ಪತ್ನಿಯ ವಿಚಾರಣೆ ನಡೆಯುತ್ತಿದೆ.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.