ADVERTISEMENT

ಸಂತ್ರಸ್ತೆ ವಿಡಿಯೊ ಹರಿಬಿಟ್ಟ ವಿಚಾರ: ಎಸಿಪಿ ಧರ್ಮೇಂದ್ರ, ಕವಿತಾ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 10:16 IST
Last Updated 31 ಮಾರ್ಚ್ 2021, 10:16 IST
ವಕೀಲ ಕೆ.ಎನ್. ಜಗದೀಶ್‌ಕುಮಾರ್
ವಕೀಲ ಕೆ.ಎನ್. ಜಗದೀಶ್‌ಕುಮಾರ್    

ಬೆಂಗಳೂರು: ‘ಸಿ.ಡಿ. ಪ್ರಕರಣದ ಸಂತ್ರಸ್ತೆಯ ವಿಡಿಯೊ‌ ಚಿತ್ರೀಕರಣ ‌ಮಾಡಿ ಮಾಧ್ಯಮಗಳಿಗೆ ನೀಡಿದ್ದ ಆರೋಪದಡಿ ವಿಶೇಷ ತನಿಖಾ‌ ತಂಡದ (ಎಸ್ಐಟಿ) ಎಸಿಪಿಗಳಾದ ಧರ್ಮೇಂದ್ರ ಹಾಗೂ ಎಂ.ಸಿ. ಕವಿತಾ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಲಾಗಿದೆ’ ಎಂದು ಸಂತ್ರಸ್ತೆ ಪರ‌ ವಕೀಲ ಕೆ.ಎನ್. ಜಗದೀಶ್‌ಕುಮಾರ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರದಲ್ಲಿ ಮಾತನಾಡಿರುವ ಅವರು, 'ಸಂತ್ರಸ್ತೆ ವಿಡಿಯೊ‌ ಮಾಡುವುದು ಹಾಗೂ ಫೋಟೊ‌ ತೆಗೆಯುವುದು ನಿಯಮಬಾಹಿರ. ಅಂಥ‌ ಕೆಲಸವನ್ನು ಈ ಇಬ್ಬರೂ ಎಸಿಪಿಗಳು ಮಾಡಿದ್ದಾರೆ. ಹೀಗಾಗಿ, ಅವರು ವಿರುದ್ಧ ನ್ಯಾಯಾಲಯಕ್ಕೆ ದೂರು‌ ನೀಡಲಾಗಿದೆ' ಎಂದರು.

‘ದೂರಿನ‌ ಸ್ವೀಕೃತ ಪ್ರತಿಯನ್ನು ಪಡೆಯಲಾಗಿದೆ. ಒಂದು ಪ್ರತಿಯನ್ನು ನಗರ ಪೊಲೀಸ್ ಕಮಿಷನರ್ ಅವರಿಗೆ ಕಳುಹಿಸಲಾಗಿದೆ. ಎಸಿಪಿಗಳಿಗೂ ದೂರಿನ ಪ್ರತಿ ಕಳುಹಿಸಲಾಗುವುದು’ ಎಂದೂ ಅವರು ಹೇಳಿದ್ದಾರೆ.

‘ನಿರ್ಭಯಾ ಪ್ರಕರಣದಲ್ಲಿ‌ ಸಾಕಷ್ಟು ನಿಯಮಗಳನ್ನು ರೂಪಿಸಲಾಗಿದೆ. ಸಂತ್ರಸ್ತೆಯ ಮುಖವಾಗಲಿ ಹಾಗೂ‌ ವೈಯಕ್ತಿಕ‌ ಮಾಹಿತಿಯಾಗಲಿ ಎಲ್ಲಿಯೂ ಸೋರಿಕೆಯಾಗಬಾರದೆಂದು ನಿಯಮ ಹೇಳುತ್ತದೆ. ಆದರೆ, ಇಲ್ಲಿ ಎಸ್ಐಟಿ ಅಧಿಕಾರಿಗಳೇ ವಿಡಿಯೊ‌ ಮಾಡಿಸಿ ತಮ್ಮ‌ ಸಿಬ್ಬಂದಿ ಕಡೆಯಿಂದ ಮಾಧ್ಯಮಗಳಿಗೆ ನೀಡಿ ಸೋರಿಕೆ ಮಾಡಿದ್ದಾರೆ. ಇವರಿಗೆ ಕಾನೂನಿನಿಂದಲೇ ತಕ್ಕ ಪಾಠ ಕಲಿಸುತ್ತೇನೆ’ ಎಂದೂ ತಿಳಿಸಿದರು

‘ಸಂತ್ರಸ್ತೆ ವಿಡಿಯೊ‌ ಸೋರಿಕೆ ಮಾಡುವ ಮೂಲಕ ಎಸಿಪಿಗಳು, ಆರೋಪಿಗೆ ಸಹಕಾರ ಮಾಡಿದ್ದಾರೆ. ಅದನ್ನೂ ದೂರಿನಲ್ಲಿ ಹೇಳಲಾಗಿದೆ’ ಎಂದೂ ತಿಳಿಸಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.