ADVERTISEMENT

ಮೇಕೆದಾಟು – ಅಣ್ಣಾಮಲೈ ಬೆಂಬಲಿಸುವ ಮೂಲಕ ಬಿಜೆಪಿಯಿಂದ ರಾಜ್ಯದ್ರೋಹ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2021, 12:20 IST
Last Updated 7 ಆಗಸ್ಟ್ 2021, 12:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮೇಕೆದಾಟು ಯೋಜನೆ ವಿಚಾರದಲ್ಲಿ ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಅಣ್ಣಾಮಲೈ ಅವರ ಹೇಳಿಕೆ ಬಗ್ಗೆ ಪಕ್ಷದ ರಾಜ್ಯ ನಾಯಕರು ಸೊಲ್ಲೆತ್ತದಿರುವುದು ಆ ಪಕ್ಷವು ರಾಜ್ಯದ್ರೋಹಿ ಎನ್ನಲು ಸಾಕ್ಷಿ ಎಂದು ಕಾಂಗ್ರೆಸ್ ಟೀಕಿಸಿದೆ.

‘ಒಂದೆಡೆ ಅಣ್ಣಾಮಲೈ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿನಿಮೀಯ ಡೈಲಾಗ್ ಹೊಡೆಯುತ್ತಾರೆ. ಇನ್ನೊಂದೆಡೆ ಪಕ್ಷದ ನಾಯಕ ಸಿ.ಟಿ.ರವಿ ಅವರು ಅಣ್ಣಾಮಲೈ ಅವರನ್ನು ಬೆಂಬಲಿಸುತ್ತಾರೆ. ಈ ನಾಟಕದಿಂದ ಕನ್ನಡಿಗರನ್ನು ಮೂರ್ಖರನ್ನಾಗಿಸಲು ಬಿಜೆಪಿ ಯತ್ನಿಸುತ್ತಿದೆ. ಮೋದಿ ಸರ್ಕಾರ ತಮಿಳುನಾಡಿನ ಪರ ಇರಲಿದೆ ಎಂಬ ಅಣ್ಣಾಮಲೈ ಹೇಳಿಕೆಗೆ ಬಿಜೆಪಿಯ ಯಾವ ನಾಯಕರೂ ಮಾತನಾಡದಿರುವುದು ಬಿಜೆಪಿ ರಾಜ್ಯದ್ರೋಹಿ ಎನ್ನಲು ಸಾಕ್ಷಿ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ರಾಜ್ಯದ ಮೇಕೆದಾಟು ಯೋಜನೆಯ ವಿರುದ್ಧ ಪ್ರತಿಭಟಿಸಿದ್ದನ್ನು ಸಿ.ಟಿ.ರವಿ ರಿಟ್ವೀಟ್ ಮಾಡುವ ಮೂಲಕ ರಾಜ್ಯ ಬಿಜೆಪಿಯ ಕರ್ನಾಟಕ ವಿರುದ್ಧದ ನಿಲುವು ಬಯಲಾಗಿದೆ. ರಾಜ್ಯ ವಿರೋಧಿ ಬಿಜೆಪಿಯಿಂದ ಕನ್ನಡಿಗರಿಗೆ ಅನ್ಯಾಯವೇ ಹೊರತು ನಯಾಪೈಸೆ ಉಪಯೋಗವಿಲ್ಲ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.