ಮಂಗಳೂರು: ಅಯೋಧ್ಯೆಯ ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೆಗೌಡ ಹೇಳಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ' ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಹಿಂದೂ ಧರ್ಮೀಯರ ಬಹುದಿನಗಳ ಕನಸು ಈ ತೀರ್ಪಿನಿಂದ ನನಸಾಗಲಿದೆ. ಆದರೆ, ದೇವಾಲಯ ನಿರ್ಮಿಸುವ ಹೊಣೆ ಹೊರಲಿರುವ ಟ್ರಸ್ಟ್ ನಲ್ಲಿ ಯಾರು ಇರುತ್ತಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಟ್ರಸ್ಟ್ ಆರ್ ಎಸ್ ಎಸ್ ಪ್ರತಿನಿಧಿಗಳ ಹಿಡಿತದಲ್ಲೇ ಇರುತ್ತದೋ, ಬೇರೆಯವರು ಇರುತ್ತಾರೋ ನೋಡಬೇಕು.ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಎರಡೂ ಕಡೆ ಬಿಜೆಪಿ ಸರ್ಕಾರಗಳೇ ಇವೆ. ಅವರು ಏನು ನಿರ್ಧರಿಸುತ್ತಾರೆ ಎಂಬುದನ್ನು ನೋಡಬೇಕು' ಎಂದರು.
ಪರಿಹಾರ ನೀಡಬೇಕಿತ್ತು: 1992ರಲ್ಲಿ ಬಾಬ್ರಿ ಮಸೀದಿಯನ್ನು ಒಡೆದು ಹಾಕಿರುವ ಕೃತ್ಯ ತಪ್ಪು ಎಂದು ಸುಪ್ರೀಂಕೋರ್ಟ್ ಹೇಳಿದೆ. ಮಸೀದಿ ನಿರ್ಮಾಣಕ್ಕೆ 5 ಎಕರೆ ಜಮೀನು ಕೊಡುವಂತೆ ನ್ಯಾಯಾಲಯ ಹೇಳಿದೆ. ಎಲ್ಲಿ ಕೊಡುತ್ತಾರೋ ಗೊತ್ತಿಲ್ಲ. ಮಸೀದಿ ಒಡೆದದ್ದು ತಪ್ಪು ಎಂದಾದ ಮೇಲೆ ಅಲ್ಪಸಂಖ್ಯಾತರಿಗೆ ಹೊಸ ಮಸೀದಿ ನಿರ್ಮಾಣಕ್ಕೆ ಒಂದಷ್ಟು ಆರ್ಥಿಕ ಪರಿಹಾರವನ್ನೂ ಘೋಷಿಸಬೇಕಿತ್ತು. ಕೇಂದ್ರ ಸರ್ಕಾರವೇ ಪರಿಹಾರ ಕೊಡುವಂತೆ ನಿರ್ದೇಶನ ನೀಡಬೇಕಿತ್ತು ಎಂದರು.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.