ADVERTISEMENT

ಬಂಡೀಪುರ | ಒಂದೇ ದಿನ ಮೂರು ಚಿರತೆಗಳ ಕಳೇಬರ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2023, 15:26 IST
Last Updated 22 ಜೂನ್ 2023, 15:26 IST
ಚಿರತೆಯ ಕಳೇಬರ ಪರಿಶೀಲಿಸುತ್ತಿರುವ ಅರಣ್ಯ ಅಧಿಕಾರಿಗಳು
ಚಿರತೆಯ ಕಳೇಬರ ಪರಿಶೀಲಿಸುತ್ತಿರುವ ಅರಣ್ಯ ಅಧಿಕಾರಿಗಳು    

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮೂರು ಕಡೆಗಳಲ್ಲಿ ಗುರುವಾರ ಒಂದೇ ದಿನ ಮೂರು ಚಿರತೆಗಳ ಕಳೇಬರ ಪತ್ತೆಯಾಗಿದೆ. 

ಒಂದು ಚಿರತೆ ವಿಷಪ್ರಾಶನದಿಂದ ಮೃತಪಟ್ಟರೆ, ಇನ್ನೆರಡು ಕಾದಾಟದಲ್ಲಿ ಮೃತಪಟ್ಟಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಗುಂಡ್ಲುಪೇಟೆ ಬಫರ್‌ ವಲಯದ ಕೂತನೂರು ಬಳಿಯ ಜಿ.ಆರ್‌.ಗೋವಿಂದರಾಜು ಎಂಬುವವರ ಕೃಷಿ ಜಮೀನಿನಲ್ಲಿ ಮೂರು ವರ್ಷದ ಹೆಣ್ಣು ಚಿರತೆಯನ್ನು ವಿಷ ಹಾಕಿ ಕೊಲ್ಲಲಾಗಿದೆ.  

ADVERTISEMENT

‘ಚಿರತೆಯು ಸಾಕು ನಾಯಿಯನ್ನು ಕೊಂದಿತೆಂದು ಕೃಷಿ ಜಮೀನಿನ ಕಾವಲುಗಾರ ನಾಯಿಯ ಮೃತದೇಹಕ್ಕೆ ಕೀಟನಾಶಕ ಸಿಂಪಡಿಸಿದ್ದರು. ಚಿರತೆಯು ಮತ್ತೆ ಬಂದು ಮೃತದೇಹವನ್ನು ತಿಂದಿದ್ದರಿಂದ ಮೃತಪಟ್ಟಿತು’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ, ‌ಸರ್ವೆ ನಂಬರ್‌ 64ರ, ಸೋಮಶೇಖರ್ ಎಂಬುವವರ ಜಮೀನಿನ ಕಾವಲುಗಾರ ರಮೇಶ್‌ ನಾಯಿಯ ಮೃತದೇಹಕ್ಕೆ ಕ್ರಿಮಿನಾಶಕ ಸಿಂಪಡಿಸಿದ್ದನ್ನು ಒಪ್ಪಿಕೊಂಡರು. ಅವರನ್ನು ಬಂಧಿಸಲಾಗಿದೆ‘ ಎಂದು ಅಧಿಕಾರಿಗಳು ಹೇಳಿದರು. 

ಇನ್ನೆರಡು ಚಿರತೆಗಳ ಕಳೇಬರಗಳು ಕುಂದುಕೆರೆ ವಲಯದ ಕನಿಯನಪುರ ಮತ್ತು ಜಿ.ಎಸ್‌.ಬೆಟ್ಟವಲಯದ ಮಂಗಲದ ಬಳಿ ಬಳಿ ಪತ್ತೆಯಾಗಿದೆ. 

‘ಕುಂದುಕೆರೆ ವಲಯ ಕನಿಯನಪುರ ಬಳಿ 5 ವರ್ಷದ ಗಂಡು ಚಿರತೆ ಹಾಗೂ ಮಂಗಲ ಬಳಿ 2.5 ವರ್ಷದ ಹೆಣ್ಣು ಚಿರತೆ ಮೃತ ಪಟ್ಟಿವೆ’ ಎಂದು ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ. 

ಸಿಬ್ಬಂದಿ ಗಸ್ತು ನಡೆಸುವ ಸಂದರ್ಭದಲ್ಲಿ ಕಳೇಬರಗಳು ಸಿಕ್ಕಿವೆ. ಎರಡು ಮೂರು ದಿನಗಳ ಹಿಂದೆಯೇ ಅವು ಮೃತಪಟ್ಟಿರಬಹುದು ಎಂದು ಹೇಳಲಾಗಿದೆ. ಅಂಗಾಂಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಹುಲಿಯೋಜನೆ ನಿರ್ದೇಶಕ ಪಿ.ರಮೇಶ್‌ ಕುಮಾರ್‌, ಪಶುವೈದ್ಯ ಡಾ.ಮಿರ್ಜಾ ವಾಸೀಂ, ಎಸಿಎಫ್‌ಗಳಾದ ರವೀಂದ್ರ, ನವೀನ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.