ಬೆಂಗಳೂರು: ‘ಭಾರತ್ ಜೋಡೊ’ ಯಾತ್ರೆ ಕುರಿತು ಸದಾಶಿವನಗರದಲ್ಲಿರುವ ಸಂಸದ ಡಿ.ಕೆ.ಸುರೇಶ್ ನಿವಾಸದಲ್ಲಿ ಶನಿವಾರ ಸಭೆ ನಡೆಯಿತು. ಈ ಕೊನೆ ಹಂತದ ಸಿದ್ಧತಾ ಸಭೆಯಲ್ಲಿ ರಾಹುಲ್ ಗಾಂಧಿ ಅವರ ಆಪ್ತ ತಂಡ ಭಾಗವಹಿಸಿತ್ತು. ಯಾತ್ರೆಯ ಯಶಸ್ವಿಗಾಗಿ ರಚಿಸಿರುವ ವಿವಿಧ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಸಭೆಯಲ್ಲಿದ್ದರು.
‘ಯಾತ್ರೆಯನ್ನು ಕರ್ನಾಟಕದಲ್ಲಿ ಯಶಸ್ವಿಗೊಳಿಸುವ ಜವಾಬ್ದಾರಿ ರಾಜ್ಯ ಕಾಂಗ್ರೆಸ್ ನಾಯಕರ ಮೇಲಿದೆ. ಕೆಪಿಸಿಸಿ ಅಧ್ಯಕ್ಷರು ಪ್ರತಿ ಹಂತದಲ್ಲಿಯೂ ಕಾರ್ಯಕ್ರಮದ ಯಶಸ್ವಿಗಾಗಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಯಾತ್ರೆಯ ರಾಷ್ಟ್ರೀಯ ಸಂಯೋಜಕ ಕೆ.ಬಿ.ಬೈಜು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯ ಕ್ಷರಾದ ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್, ಶಾಸಕರಾದ ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಮುಖಂಡರಾದ ಚಲುವರಾಯಸ್ವಾಮಿ, ಎಸ್.ಸಿ. ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ರಘುನಂದನ್ ರಾಮಣ್ಣ, ವಿನಯ್ ಕಾರ್ತಿಕ್ ಸಭೆಯಲ್ಲಿದ್ದರು.
ಗುಂಡ್ಲುಪೇಟೆ ಮೂಲಕ ಇದೇ 30ರಂದು ಕರ್ನಾಟಕ ಪ್ರವೇಶಿಸಲಿರುವ ಈ ಯಾತ್ರೆ, 21 ದಿನ ಸಂಚಾರ ನಡೆಸಲಿದೆ. ಒಟ್ಟು 500 ಕಿ.ಮೀ ಪಾದಯಾತ್ರೆ ಮಧ್ಯ ಕರ್ನಾಟಕದಲ್ಲಿ ನಡೆಯಲಿದ್ದು, ನಾಯಕರಿಗೆ ಜಿಲ್ಲಾವಾರು ಜವಾಬ್ದಾರಿ ಹಂಚಿಕೆ ನೀಡಲಾಗಿದೆ. ರಾಯಚೂರು ಮೂಲಕ ಯಾತ್ರೆ ತೆಲಂಗಾಣಕ್ಕೆ ಹೊರಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.