ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಪದೇ ಪದೇ ಪಾಕಿಸ್ತಾನವನ್ನು ಎಳೆದು ತರುವ ಮೋದಿ ಭಾರತದ ಪ್ರಧಾನಿಯೋ ಪಾಕಿಸ್ತಾನದ ಪ್ರಧಾನಿಯೋ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಟ್ವೀಟ್ ಟೀಕೆಗೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.
‘ಸದಾ ದೇಶದ ಬಗ್ಗೆ ಚಿಂತಿಸೋ ಪ್ರಧಾನಮಂತ್ರಿಗಳನ್ನು ಯಾವ ದೇಶದ ಪ್ರಧಾನಿ ಅಂತ ಪ್ರಶ್ನೆ ಮಾಡುವ ಕುಮಾರಸ್ವಾಮಿಗೆ ಮಜಾ ಮಾಡಲು ಖುಷಿಪಡಲು ಬೇರೆ ದೇಶ ಬೇಕು. ದುಃಖ, ಕಣ್ಣೀರು ಹಾಕಲು ಈ ದೇಶ ಬೇಕು ಅಲ್ವಾ?’ ಎಂದು ಈಶ್ವರಪ್ಪ ತಮ್ಮ ಎಂದಿನ ಧಾಟಿಯಲ್ಲೇ ಪ್ರಶ್ನೆ ಮಾಡಿದ್ದಾರೆ.
ಸಚಿವ ಸಿಟಿ ರವಿ ಟ್ವೀಟ್ ಮಾಡಿ, ‘ಸಿದ್ಧಗಂಗಾ ಮಠದಲ್ಲಿ ಮೋದಿ ಮಾಡಿದ ಭಾಷಣ ಉಪಯುಕ್ತವಾಗಿದೆ ಎಂದು ಸಿದ್ಧಲಿಂಗ ಶ್ರೀಗಳೇ ಹೇಳಿದ್ದಾರೆ ಇನ್ನಾದರೂ ಮಾಜಿ ಮುಖ್ಯಮಂತ್ರಿಗಳು ಕೊಳಕು ಟೀಕೆ ಕೊನೆ ಮಾಡಲಿ,’ ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ.
ಬಿಜೆಪಿ ಕೂಡ ತನ್ನ ಅಧಿಕೃತ ಟ್ವಿಟರ್ನಿಂದ ಎಚ್ಡಿಕೆಗೆ ತಿರುಗೇಟು ನೀಡಿದೆ. ‘ಕುಮಾರಸ್ವಾಮಿ ಅವರೇ, ಸಿದ್ದಗಂಗಾ ಮಠದ ಸ್ವಾಮೀಜಿಗಳೇ ಪ್ರಧಾನಿ ಮೋದಿ ಭಾಷಣವನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಪಾಸ್ಟಿಕ್ ನಿಷೇಧ, ಬಯಲು ಶೌಚಾಲಯ ಮುಕ್ತ ಕನಸು, ಜಲಸಂರಕ್ಷಣೆ ವಿಚಾರಗಳು ಮಕ್ಕಳಿಗೆ ಪ್ರೇರಣೆ ಎಂದು ಶ್ರೀಗಳೇ ಹೇಳಿರುವಾಗ, ನಿಮ್ಮ ಕುಹಕಕ್ಕೆ ನಾಡಿನ ಜನತೆ ಉತ್ತರಿಸುತ್ತಾರೆ,’ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.