ADVERTISEMENT

ಕೇಂದ್ರದ ಅಕ್ಕಿ ಪುಕ್ಕಟೆಯಾಗಿ ಕೊಟ್ಟು ಜಾಹೀರಾತು ನೀಡಿದ್ದ ಸಿದ್ದರಾಮಯ್ಯ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜನವರಿ 2022, 11:43 IST
Last Updated 29 ಜನವರಿ 2022, 11:43 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡಿದ ಅಕ್ಕಿಯನ್ನು ಪುಕ್ಕಟೆಯಾಗಿ ಕೊಟ್ಟು ಬಸ್ಸು, ಗೋಡೆಗಳ ಮೇಲೆ ಸಿದ್ದರಾಮಯ್ಯ ಜಾಹೀರಾತು ಬರೆಸಿಕೊಂಡಿದ್ದರು ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಬಣ್ಣಬಣ್ಣದ ಜಾಹೀರಾತು ಕೊಟ್ಟು ಸುಳ್ಳು ಹೇಳುತ್ತಾರೆ ಎಂದು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದರು. ಬೊಮ್ಮಾಯಿ ಸರ್ಕಾರದ ಆರು ತಿಂಗಳ ಆಡಳಿತವನ್ನು ಲೇವಡಿ ಮಾಡಿದ್ದರು. ಇದಕ್ಕೆ ಸಾಮಾಜಿಕ ಮಾಧ್ಯಮ ಟ್ವಿಟರ್ ಮೂಲಕ ಬಿಜೆಪಿ ತಿರುಗೇಟು ನೀಡಿದೆ.

'ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಸಿವು ಮುಕ್ತ ಕರ್ನಾಟಕ ಎಂದು ಘೋಷಣೆ ಮಾಡಿದ್ದರು. ಮೋದಿ ಸರ್ಕಾರ ನೀಡಿದ ಅಕ್ಕಿಯನ್ನು ಪುಕ್ಕಟೆಯಾಗಿ ಕೊಟ್ಟು ಅನ್ನಭಾಗ್ಯದ ಹರಿಕಾರ ಎಂದು ಬಸ್ಸು, ಗೋಡೆಗಳ ಮೇಲೆ ಜಾಹೀರಾತು ಬರೆಸಿಕೊಂಡರು. ಸಿದ್ದರಾಮಯ್ಯನವರೇ, ಅದಕ್ಕೆಲ್ಲ ಮಾಡಿದ ಖರ್ಚು ಎಷ್ಟು? ಜಾಹೀರಾತು ಸರ್ಕಾರದ ಒಂದು ಉಪಕ್ರಮ ಎಂಬುದು ತಿಳಿದಿಲ್ಲವೇ' ಎಂದು ಬಿಜೆಪಿ ಪ್ರಶ್ನಿಸಿದೆ.

'ಸಿದ್ದರಾಮಯ್ಯನವರೇ, ನೀವು ಮುಖ್ಯಮಂತ್ರಿಯಾಗಿದ್ದಾಗ ಬಯಲು ಬಹಿರ್ದೆಸೆ ಮುಕ್ತ ಕರ್ನಾಟಕ ಎಂದು ಜಾಹೀರಾತು ನೀಡಿದಿರಿ. ಆ ಬಣ್ಣಬಣ್ಣದ ಜಾಹೀರಾತಿಗೆ ಎಷ್ಟು ಕೋಟಿ ಖರ್ಚು ಮಾಡಿದ್ದೀರಿ? ಕೊನೆಗೂ ನಿಮ್ಮ ಕಾಲದಲ್ಲಿ ಬಯಲು ಬಹಿರ್ದೆಸೆ ನಿಲ್ಲಿಸಲು ಸಾಧ್ಯವಾಯಿತೇ' ಎಂದು ಬಿಜೆಪಿ ಪ್ರಶ್ನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.